-ಶೌರ್ಯ ಡೆಸ್ಕ್
ಒಂದು ಕಡೆ ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣ ಕಾರ್ಯಗಳು ಭರದಿಂದ ಸಾಗುತ್ತಿವೆ. ಮತ್ತೊಂದು ಕಡೆ ಬಿಜೆಪಿ ಪಕ್ಷದವರೇ ಆದ ಜಗ್ಗೇಶ್, ಅದೇ ರಾಮಮಂದಿರದ ಕುರಿತು ಮುಸ್ಲಿಂ ಮಹಿಳೆಯಿಂದ ಪಾಠ ಹೇಳಿಸಿಕೊಳ್ತಿದ್ದಾರೆ. ಇದೊಂಥರಾ ಸಾಮರಸ್ಯ ಸಾರುವ ವಿಷ್ಯವಾದ್ರೂ, ವಿವಾದಕ್ಕೆ ನಾಂದಿ ಹಾಡೋ ರೀತಿ ಕಾಣ್ತಿದೆ. ಅದ್ರ ಅಸಲಿ ಇನ್ಸೈಡ್ ಮ್ಯಾಟರ್ ಏನು ಅಂತೀರಾ..?

ಎರಡು ವಾರಕ್ಕೆ ಮುಂಚೆ ತೆರೆಕಂಡ ತೋತಾಪುರಿ, ಹತ್ತು ಹಲವು ಕಾರಣಗಳಿಂದ ಸುದ್ದಿಯಲ್ಲಿದೆ. ಒಂದ್ಕಡೆ ವಿಜಯ್ ಪ್ರಸಾದ್ ಅವ್ರ ಪೋಲಿ ಜೋಕ್ಸ್. ಮತ್ತೊಂದ್ಕಡೆ ಜಾತಿ, ಸಮುದಾಯಗಳನ್ನ ಮೀರಿದ ಸಾಮರಸ್ಯ ಜೀವನದ ಪಯಣ. ಜಗ್ಗೇಶ್, ಅದಿತಿ, ದತ್ತಣ್ಣ, ಸುಮನ್ ರಂಗನಾಥ್, ಡಾಲಿ, ವೀಣಾ ಸುಂದರ್ ಅಂತಹ ನುರಿತ ಕಲಾವಿದರ ದಂಡಿರೋ ತೋತಾಪುರಿಯ ಘಮಲು ಜೋರಾಗೇ ಎಲ್ಲೆಡೆ ಹಬ್ಬಿದೆ.
ಎಲ್ಲಕ್ಕಿಂತ ಹೆಚ್ಚಾಗಿ ಈರೇಗೌಡನ ಪಾತ್ರಧಾರಿ ಜಗ್ಗೇಶ್, ಶಕೀಲಾ ಭಾನು ಅನ್ನೋ ಮುಸ್ಲಿಂ ಸಮುದಾಯದ ಪಾತ್ರಧಾರಿ ಅದಿತಿಯ ಪ್ರೇಮ ಪ್ರಸಂಗ ಚಿತ್ರದ ಸೆಂಟರ್ ಆಫ್ ಅಟ್ರಕ್ಷನ್. ಇಲ್ಲಿ ಸಾಮರಸ್ಯ ಸಾರುವಂತಹ ಕಂಟೆಂಟ್ ಇದ್ರೂ, ರಾಮಮಂದಿರ ವಿವಾದವನ್ನು ಮತ್ತೆ ಎಳೆದು ತಂದಂತೆ ಕಾಣ್ತಿದೆ. ನಿರ್ದೇಶಕ ವಿಜಯ್ ಪ್ರಸಾದ್ ಮತ್ತೆ ವಿವಾದಕ್ಕೆ ನಾಂದಿ ಹಾಡ್ತಿದ್ದಾರಾ ಅಥ್ವಾ ಭಾವೈಕ್ಯತೆಯ ಸಂದೇಶ ನೀಡ್ತಿದ್ದಾರಾ ಅನ್ನೋ ಪ್ರಶ್ನೆ ಕಾಡ್ತಿದೆ.

ಶ್ರೀರಾಮಚಂದ್ರನಿಗೆ ಮಂದಿರ ಇಷ್ಟವೋ ಅಥ್ವಾ ಮಳೆಯೋ ಅಂತ ಮುಸ್ಲಿಂ ಪಾತ್ರಧಾರಿಯನ್ನ ಕೇಳೋ ಜಗ್ಗೇಶ್, ಕೊನೆಗೆ ಆಕೆಯಿಂದಲೇ ಪಾಠ ಹೇಳಿಸಿಕೊಳ್ಳುವಂತಾಗುತ್ತೆ. ಸಾಮ್ರಾಜ್ಯವೇ ಬಿಟ್ಟು ದೊಡ್ಡವನಾದವ, ಮಂದಿರ ಕೇಳಿ ಸಣ್ಣವನಾಗ್ತಾನಾ..? ಶ್ರೀರಾಮನನ್ನ ಮಂದಿರದಲ್ಲಿ ಇಟ್ರೆ ಒಂಟಿಯಾಗೇ ಇರ್ತಾನೆ ಅನ್ನೋ ಡೈಲಾಗ್ಗಳು ಬಹಿರಂಗವಾಗಿ ಬಿಜೆಪಿ ಹಾಗೂ ರಾಮಭಕ್ತರಿಗೆ ತಿರುಗೇಟು ನೀಡಿದಂತಿದೆ.

ಸಿನಿಮಾದಲ್ಲಿ ನಾವು ಜಾತಿ, ಧರ್ಮಗಳನ್ನ ದಾಟೋದಕ್ಕೆ ಇಷ್ಟು ಸಾಕು ಅನ್ನೋ ಜಗ್ಗೇಶ್ ಅವ್ರು ಕೂಡ ಬಿಜೆಪಿ ಪಕ್ಷದವರೇ ಅನ್ನೋದು ವಿಶೇಷ. ಇಲ್ಲಿ ರಾಮನಿಗೆ ಮಂದಿರ ಅನ್ನೋದ್ರ ಅವಶ್ಯಕತೆ ಇರಲಿಲ್ಲ ಅನ್ನೋದನ್ನ ಪರೋಕ್ಷವಾಗಿ ಹೇಳಿದಂತಿದೆ. ಶಕೀಲಾ ಭಾನು- ಈರೇಗೌಡ ಮದ್ವೆ ವಿಚಾರಕ್ಕೆ ಬಂದು ನಡೆಯೋ ಈ ಸಂಭಾಷಣೆ ಚಿತ್ರದ ಓಪನಿಂಗ್ಗೇ ಬೂಸ್ಟರ್ ಡೋಸ್ನಂತಿದೆ. ಆದ್ರೆ ವಿವಾದ ಸೃಷ್ಟಿಸೋ ಸೂಚನೆ ನೀಡಿದೆ.
ನಿರ್ದೇಶಕರು ಬಿಜೆಪಿ ವರ್ಸಸ್ ಕಾಂಗ್ರೆಸ್ನ ಮನದಲ್ಲಿಟ್ಟುಕೊಂಡು ಈ ಸೀಕ್ವೆನ್ಸ್ ಸೃಷ್ಟಿಸಿದ್ರಾ ಅಥವಾ ಇಂದಿನ ಪ್ರಸ್ತುತ ಸಮಾಜದ ಉದ್ಧಾರಕ್ಕಾಗಿ, ಕೋಮು ಕಿತ್ತಾಟಕ್ಕೆ ಮುಲಾಮಾಗಿಸೋಕೆ ಇದನ್ನ ಮಾಡಿದ್ರಾ ಅನ್ನೋದನ್ನು ಅವರೇ ಸ್ಪಷ್ಟಪಡಿಸಬೇಕಿದೆ. ಒಟ್ಟಾರೆ ತೋತಾಪುರಿ ಸಿನಿಮಾ ಜಗ್ಗೇಶ್ ಕೆರಿಯರ್ಗೆ ಬಿಗ್ ಟ್ವಿಸ್ಟ್ ನೀಡಿರೋದಂತೂ ನಿಜ.
