-ಶೌರ್ಯ ಸಂಗ್ರಹ
ಹೇಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು? ಇದಕ್ಕೆ ದೇಸಿ ಆಹಾರ ಪದ್ಧತಿಯಲ್ಲೇ ಉತ್ತರವಿದೆ. ನಮ್ಮ ನಿತ್ಯದ ಆಹಾರ ಸೇವನೆಯಿಂದಲೇ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಹಣ್ಣು ತರಕಾರಿಗಳು, ಮನೆಮದ್ದಿನಂತಹ ಪದಾರ್ಥಗಳು ನಮಗೆ ದಿವ್ಯೌಷಧಿಯಾಗಿ ಚೈತನ್ಯ ತುಂಬಲಿವೆ. ಇಂತಹ ಪದಾರ್ಥಗಳ ಮಾಹಿತಿ ಇಲ್ಲಿವೆ.

ಕೊರೋನಾ ನಂತರ ಎಲ್ಲೆಡೆಯೂ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು ಎಂಬ ಮಾತೇ ಕೇಳಿಬರುತ್ತಿದೆ. ಕೊರೋನಾ ವೈರಸ್ ಮಾತ್ರವಲ್ಲ ಕೆಮ್ಮು, ಶೀತದಂತಹ ವೈರಸ್ ಸೇರಿದಂತೆ ದೇಹದ ಮೇಲೆ ದಾಳಿ ಮಾಡುವ ಇತರೆ ಸಾಂಕ್ರಾಮಿಕ ವೈರಸ್ಗಳನ್ನು ಹಿಮ್ಮೆಟ್ಟಿಸಲು ರೋಗನಿರೋಧಕ ಶಕ್ತಿ ವೃದ್ಧಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಇದು ನಮ್ಮ ದೇಹಕ್ಕೆ ರಕ್ಷಣಾ ಕವಚವಿದ್ದಂತೆ. ಆದರೆ ಹೇಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು? ಇದಕ್ಕೆ ದೇಸಿ ಆಹಾರ ಪದ್ಧತಿಯಲ್ಲೇ ಉತ್ತರವಿದೆ. ನಮ್ಮ ನಿತ್ಯದ ಆಹಾರ ಸೇವನೆಯಿಂದಲೇ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಹಣ್ಣು ತರಕಾರಿಗಳು, ಮನೆಮದ್ದಿನಂತಹ ಪದಾರ್ಥಗಳು ನಮಗೆ ದಿವ್ಯೌಷಧಿಯಾಗಿ ಚೈತನ್ಯ ತುಂಬಲಿವೆ. ಇಂತಹ ಪದಾರ್ಥಗಳ ಮಾಹಿತಿ ಇಲ್ಲಿವೆ.
ಸಿಟ್ರಸ್ ಹಣ್ಣುಗಳು: ಹುಳಿ ಅಂಶ ಹೊಂದಿರುವ ಲಿಂಬು, ಕಿತ್ತಳೆ, ದ್ರಾಕ್ಷಿ, ಮೂಸಂಬಿ ಹಣ್ಣುಗಳಲ್ಲಿ ವಿಟಮಿನ್ ಸಿ ಅಂಶವಿರುತ್ತದೆ. ಇದು ರೋಗ ನಿರೋಧಕ ಶಕ್ತಿ ಉತ್ಪಾದನೆಗೆ ಸಹಕಾರಿ.
ಕೆಂಪು ಡೊಳ್ಳುಮೆಣಸು: ಸಿಟ್ರಸ್ ಹಣ್ಣುಗಳಿಗಿಂತ ಮೂರು ಪಟ್ಟು ಹೆಚ್ಚು ವಿಟಮಿನ್ ಸಿ ಕೆಂಪು ಡೊಳ್ಳುಮೆಣಸಿನಲ್ಲಿದೆ. ಅಷ್ಟೇ ಅಲ್ಲದೆ, ಬೀಟಾ ಕ್ಯಾರೋಟೀನ್ ಅಂಶ ಕೂಡ ಇರುತ್ತದೆ. ಇದನ್ನು ತಿನ್ನುವುದರಿಂದ ತ್ವಚೆಗೆ, ಕಣ್ಣಿಗೂ ಲಾಭವಿದೆ.

ಬ್ರಾಕೊಲಿ: ಇದು ವಿಟಮಿನ್ಸ್ ಹಾಗೂ ಮಿನರಲ್ಸ್ನಿಂದ ತುಂಬಿದೆ. ವಿಟಮಿನ್ ಎ, ಸಿ, ಹಾಗೂ ಕೂಡ ಇದೆ. ಅಷ್ಟೇ ಅಲ್ಲದೆ, ಫೈಬರ್ ಕೂಡ ಇದೆ. ಇದು ಅತ್ಯಂತ ಆರೋಗ್ಯಯುತ ತರಕಾರಿ. ಇದನ್ನು ಹೆಚ್ಚು ಬೇಯಿಸದೆ ತಿಂದರೆ ಒಳ್ಳೆಯದು.

ಬೆಳ್ಳುಳ್ಳಿ: ಎಲ್ಲಾ ಅಡುಗೆಮನೆಯಲ್ಲಿಯೂ ಬೆಳ್ಳುಳ್ಳಿಗೆ ಅಗ್ರ ಸ್ಥಾನವಿದೆ. ಇದು ರೋಗಗಳ ವಿರುದ್ಧ ಹೋರಾಡುತ್ತದೆ. ರಕ್ತದೊತ್ತಡಕ್ಕೂ ಸಹಕಾರಿಯಾಗಿದೆ. ಇದರಲ್ಲಿ ಸಲ್ಫರ್ ಇರುವುದರಿಂದ ರೋಗ ನಮ್ಮ ಕಡೆ ಮುಖ ಮಾಡುವುದಿಲ್ಲ.

ಶುಂಠಿ: ಸಾಮಾನ್ಯವಾಗಿ ಸಣ್ಣಪುಟ್ಟ ಕಾಯಿಲೆ ಹೋಗಲಾಡಿಸಲು ಶುಂಠಿ ಬಳಸುತ್ತೇವೆ. ಗಂಟಲು ನೋವು, ಶೀತ, ಕೆಮ್ಮು ಇವುಗಳಿಗೆ ಶುಂಠಿ ರಾಮಬಾಣ. ಎಲ್ಲ ಅಡುಗೆಯಲ್ಲಿಯೂ ಶುಂಠಿ ಬಳಸಿದರೆ ರೋಗಗಳಿಂದ ಮುಕ್ತರಾಗಬಹುದು.

ಬಾದಾಮಿ: ಇದರಲ್ಲಿ ವಿಟಮಿನ್ ಇ, ಸಿ ಎರಡೂ ಇದೆ. ರೋಗನಿರೋಧಕ ಶಕ್ತಿ ಹೆಚ್ಚಿಸುವ ಗುಣ ಇದೆ. ಡ್ರೈಫ್ರೂಟ್ಸ್ ತಿನ್ನುವುದರಿಂದ ದಪ್ಪ ಆಗುತ್ತೇವೆ ಎಂದು ಜನ ತಿಳಿದುಕೊಂಡಿದ್ದಾರೆ. ಆದರೆ ಬಾದಾಮಿಯಲ್ಲಿರುವ ಕೊಬ್ಬು ದೇಹಕ್ಕೆ ಒಳ್ಳೆಯದು.

ಲವಂಗ: ಲವಂಗ ಇಂದು ನಿನ್ನೆಯಿಂದ ಬಳಕೆಯಲ್ಲಿ ಇರುವಂತದ್ದಲ್ಲ. ಅನಾದಿ ಕಾಲದಿಂದಲೂ ಬಳಕೆಯಲ್ಲಿ ಇದೆ. ಅಡುಗೆಯಲ್ಲಿ ಇದನ್ನು ಬಳಸುವುದರಿಂದ ರೋಗನಿರೋಧಕ ಶಕ್ತಿ ವೃದ್ಧಿಸಿಕೊಳ್ಳಬಹುದು. ಅಷ್ಟೇ ಅಲ್ಲದೆ ಹಲ್ಲು ನೋವು, ಗಂಟಲು ಕೆರೆತ, ಅಜೀರ್ಣ, ಬಾಯಿ ದುರ್ಗಂಧ, ತುರಿಕೆ, ಒತ್ತಡ, ಬ್ಯಾಕ್ಟೀರಿಯಾ ನಾಶಕ್ಕೂ ಲವಂಗ ಸಹಕಾರಿ.

ಲವಂಗದಲ್ಲಿ ಇರುವಂತಹ ನೈಜೀರಿಕಿನ್ ಎನ್ನುವ ಅಂಶವು ಮಧುಮೇಹಿಗಳ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ನೆರವಾಗುವುದು. ನಿತ್ಯ ಒಂದು ಲವಂಗವನ್ನು ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಬಹುದು.