-ಶೌರ್ಯ ಡೆಸ್ಕ್
ಟಿಪ್ಪುಸುಲ್ತಾನ್ಗೆ ಸೇರಿದ ಬ್ರಿಟಿಷ್ ಸಿಪಾಯಿಯ ಕತ್ತಿನ ರಕ್ತ ಹೀರುತ್ತಿರುವ ಮಾದರಿಯ ಹುಲಿಯನ್ನು ಚಿತ್ರಿಸಿರುವ ಮರದ ಮೆಕಾನಿಕಲ್ ಆಟಿಕೆಯನ್ನು ಬ್ರಿಟಿಷರ ಮೇಲೆ ತನಗಿದ್ದ ದ್ವೇಷ ಬಿಂಬಿಸಲು ಟಿಪ್ಪು ಮಾಡಿಸಿದ್ದ. ಆತನ ಪತನದ ನಂತರ 1799ರಲ್ಲಿ ಈಸ್ಟ್ ಇಂಡಿಯಾ ಕಂಪನಿ ಇದನ್ನು ಇಂಗ್ಲೆಂಡ್ಗೆ ಕೊಂಡೊಯ್ದು ಟವರ್ ಆಫ್ ಲಂಡನ್ನಲ್ಲಿ ಪ್ರದರ್ಶನಕ್ಕಿಟ್ಟಿತ್ತು. 1808ರಲ್ಲಿ ಈಸ್ಟ್ ಇಂಡಿಯಾ ಹೌಸ್ನಲ್ಲಿದ್ದ ಈ ಅಮೂಲ್ಯ ಆಟಿಕೆ ಈಗ ಲಂಡನ್ನ ವಿಕ್ಟೋರಿಯ ಮತ್ತು ಅಲ್ಬರ್ಟ್ ಮ್ಯೂಸಿಯಂನಲ್ಲಿದೆ. ಟಿಪ್ಪುಸುಲ್ತಾನ್ಗೆ ಸೇರಿದ ಉಂಗುರ ಹಾಗೂ ಕತ್ತಿಯನ್ನು 2004 ರಲ್ಲಿ ಆಂಗ್ಲರು ಹರಾಜಿಗಿಟ್ಟಿದ್ದರು.

“ಪ್ರತಿ ಬ್ರಿಟಿಷ್ ಮ್ಯೂಸಿಯಂ ಒಂದು ಚೋರ್ ಬಜಾರ್ ಆಗಿರುತ್ತದೆ. ಆಂಗ್ಲರು ತಮ್ಮ ಯಶಸ್ವಿ ಕಳ್ಳತನಗಳನ್ನು ಇಲ್ಲಿ ಪ್ರದರ್ಶನಕ್ಕಿಟ್ಟಿದ್ದಾರೆ. ನಮ್ಮಿಂದ ನಿಮ್ಮ ಅಜ್ಜಂದಿರು ದೋಚಿದ ಅಮೂಲ್ಯ ವಸ್ತುಗಳನ್ನೇಕೆ ಹೆಮ್ಮೆಯಿಂದ ಪ್ರದರ್ಶನಕ್ಕಿಟ್ಟಿದ್ದೀರಿ?’’… ಹೀಗೆಂದು ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಶಶಿ ತರೂರ್ ಮಾಧ್ಯಮವೊಂದರ ವರದಿಯನ್ನಾಧರಿಸಿ ಟ್ವೀಟ್ ಮಾಡಿದ್ದರು. ಭಾರತವನ್ನು ವಸಾಹತು ಮಾಡಿಕೊಂಡು ದಬ್ಬಾಳಿಕೆ ನಡೆಸಿದ್ದಕ್ಕೆ ಈಗಿನ ಇಂಗ್ಲೆಂಡ್ ಆಡಳಿತ ಕ್ಷಮೆ ಕೇಳಬೇಕು ಎಂದೂ ಒತ್ತಾಯಿಸಲಾಗಿತ್ತು. ಇದು ಸುದ್ದಿಯಾದ ನಂತರ ಭಾರತದಿಂದ ಬ್ರಿಟಿಷರು ದೋಚಿದ ಸಂಪತ್ತು, ಅಮೂಲ್ಯ ವಸ್ತುಗಳ ಬಗ್ಗೆ ದೊಡ್ಡ ಚರ್ಚೆಯೇ ನಡೆದಿತ್ತು. ಕೊಹಿನೂರು ವಜ್ರ ಹಿಂದಿರುಗಿಸುವಂತೆ ಯುಕೆ ಸುಪ್ರೀಂಕೋರ್ಟ್ನಲ್ಲಿ ಭಾರತದ ಎನ್ಜಿಒ ಒಂದು ದಾವೆಯನ್ನು ಹೂಡಿತ್ತು. ಕೊಹಿನೂರು ವಜ್ರವನ್ನು ಕಾಣಿಕೆಯಾಗಿ ವಿಕ್ಟೋರಿಯ ರಾಣಿಗೆ ನೀಡಲಾಗಿತ್ತೇ ಅಥವಾ ಅದನ್ನು ಕದಿಯಲಾಗಿತ್ತೇ ಎಂಬುದು ಪ್ರಕರಣದ ವೇಳೆ ಚರ್ಚೆಗೆ ಬಂದಿತ್ತು. ಇದರ ನಂತರ ಬ್ರಿಟನ್ ವಶದಲ್ಲಿರುವ ಭಾರತಕ್ಕೆ ಸೇರಿದ ಅಪರೂಪದ ವಸ್ತುಗಳನ್ನು ಪಟ್ಟಿ ಮಾಡುವ ಕಾರ್ಯವನ್ನು ಇಲ್ಲಿನ ಮಾಧ್ಯಮಗಳು ಮಾಡುತ್ತಲೇ ಇವೆ.

ಅರಮನೆಯಲ್ಲಿವೆ ಶಿವಾಜಿ-ಟಿಪ್ಪುಸುಲ್ತಾನ್ ನೆನಪುಗಳು: ಶಿವಾಜಿ ಬಳಸುತ್ತಿದ್ದ ಮೂರು ಕತ್ತಿಗಳಾದ ಭವಾನಿ, ಜಗದಾಂಬ ಮತ್ತು ತುಳಜಾ ಖಡ್ಗಗಳ ಪೈಕಿ ಜಗದಾಂಬ ಖಡ್ಗ ಬಂಕಿಂಗ್ಹ್ಯಾಮ್ ಅರಮನೆಯಲ್ಲಿದೆ. ಅದನ್ನು ಪ್ರಿನ್ಸ್ ಆಫ್ ವೆಲ್ಸ್ ಎಡ್ವರ್ಡ್- VII ಅವರ ಭಾರತ ಭೇಟಿಯ ಕಾಲದಲ್ಲಿ ಕಾಣಿಕೆಯಾಗಿ ನೀಡಲಾಗಿತ್ತು ಎನ್ನಲಾಗುತ್ತದೆ. ಟಿಪ್ಪುಸುಲ್ತಾನ್ಗೆ ಸೇರಿದ ಬ್ರಿಟಿಷ್ ಸಿಪಾಯಿಯ ಕತ್ತಿನ ರಕ್ತ ಹೀರುತ್ತಿರುವ ಮಾದರಿಯ ಹುಲಿಯನ್ನು ಚಿತ್ರಿಸಿರುವ ಮರದ ಮೆಕಾನಿಕಲ್ ಆಟಿಕೆಯನ್ನು ಬ್ರಿಟಿಷರ ಮೇಲೆ ತನಗಿದ್ದ ದ್ವೇಷ ಬಿಂಬಿಸಲು ಟಿಪ್ಪು ಮಾಡಿಸಿದ್ದ. ಆತನ ಪತನದ ನಂತರ 1799ರಲ್ಲಿ ಈಸ್ಟ್ ಇಂಡಿಯಾ ಕಂಪನಿ ಇದನ್ನು ಇಂಗ್ಲೆಂಡ್ಗೆ ಕೊಂಡೊಯ್ದು ಟವರ್ ಆಫ್ ಲಂಡನ್ನಲ್ಲಿ ಪ್ರದರ್ಶನಕ್ಕಿಟ್ಟಿತ್ತು. 1808ರಲ್ಲಿ ಈಸ್ಟ್ ಇಂಡಿಯಾ ಹೌಸ್ನಲ್ಲಿದ್ದ ಈ ಅಮೂಲ್ಯ ಆಟಿಕೆ ಈಗ ಲಂಡನ್ನ ವಿಕ್ಟೋರಿಯ ಮತ್ತು ಅಲ್ಬರ್ಟ್ ಮ್ಯೂಸಿಯಂನಲ್ಲಿದೆ. ಟಿಪ್ಪುಸುಲ್ತಾನ್ಗೆ ಸೇರಿದ ಉಂಗುರ ಹಾಗೂ ಕತ್ತಿಯನ್ನು 2004 ರಲ್ಲಿ ಆಂಗ್ಲರು ಹರಾಜಿಗಿಟ್ಟಿದ್ದರು.

ಇನ್ನುಳಿದಂತೆ ಭಾರತಕ್ಕೆ ಸೇರಿದ ಅಮೂಲ್ಯ ಮಾರ್ಬಲ್ನಿಂದ ಮಾಡಿದ ಅಂಬಿಕಾ ದೇವತೆಯ ವಿಗ್ರಹ ಮೊಘಲ್ ಚಕ್ರವರ್ತಿ ಷಹಜಹಾನ್ ಬಳಸುತ್ತಿದ್ದ ವೈನ್ ಕಪ್, ಶೌರ್ಯಕ್ಕೆ ಹೆಸರಾಗಿದ್ದ ಸಿಖ್ ದೊರೆ, ಮಹಾರಾಜ ರಂಜಿತ್ ಸಿಂಗ್ ಅವರ ಅಪರೂಪದ ವಜ್ರಖಚಿತ ಕಿರೀಟ ಕೂಡಾ ವಿಕ್ಟೋರಿಯ ಮತ್ತು ಅಲ್ಬರ್ಟ್ ಮ್ಯೂಸಿಯಂನಲ್ಲಿದೆ. ಸುಲ್ತಾನ್ ಗಂಜ್ನ ಲೋಹದ ಬುದ್ಧನ ವಿಗ್ರಹವನ್ನು ಬ್ರಿಟಿಷ್ ರೈಲ್ವೆ ಇಂಜಿನಿಯರ್ ಇ.ಬಿ. ಹ್ಯಾರಿಸ್ ಎನ್ನುವವನು 1861 ರಲ್ಲಿ ಇಂಗ್ಲೆಂಡ್ಗೆ ಸಾಗಿಸಿದ್ದ. ಈಗ ಬಿರ್ಮಿಂಗ್ ಹ್ಯಾಮ್ ಮ್ಯೂಸಿಯಂ ಮತ್ತು ಆರ್ಟ್ ಗ್ಯಾಲರಿಯಲ್ಲಿದೆ. ಆಂಧ್ರ ಪ್ರದೇಶದ ಅಮರಾವತಿ ಸ್ತೂಪದ ಶಿಲಾ ಶಾಸನಗಳು ಮತ್ತು ಅಪರೂಪದ ಶಿಲೆಗಳಲ್ಲಿ ಮಾಡಿದ ಕಲಾಕೃತಿಗಳು ಬ್ರಿಟಿಷ್ ಮ್ಯೂಸಿಯಂನಲ್ಲಿದೆ. ಭಾರತಕ್ಕೆ ಸೇರಿದ ಇಂತಹ ನೂರಾರು ಅಮೂಲ್ಯ ವಸ್ತುಗಳನ್ನು ಅಲ್ಲಿಂದ ವಾಪಸ್ ತರಲು ಪ್ರಯತ್ನ ನಡೆಯುತ್ತಲೇ ಇದೆ. ಬ್ರಿಟಿಷ್ ವಸಾಹತುಗಳಾಗಿದ್ದ ವಿಶ್ವದ ನಾನಾ ರಾಷ್ಟ್ರಗಳ ಇಂತಹ ವಸ್ತುಗಳಿಂದಲೇ ಬ್ರಿಟಿಷ್ ಸಂಗ್ರಹಾಲಯಗಳು ತುಂಬಿಹೋಗಿವೆ. ಈಗ ಹೇಳಿ ಆಂಗ್ಲರ ಮ್ಯೂಸಿಯಂಗಳು ಚೋರ್ ಬಜಾರ್ಗಳಲ್ಲದೆ ಮತ್ತೇನು?