-ಶೌರ್ಯ ಡೆಸ್ಕ್
ಹೇಳಿಕೇಳಿ ಕೆಸಿಆರ್ ಸಂಪನ್ಮೂಲ ಭರಿತ ರಾಜ್ಯದ ಮುಖ್ಯಮಂತ್ರಿ ಮತ್ತು ರಾಷ್ಟ್ರ ರಾಜಕಾರಣದ ಮೇಲೆ ಹಿಡಿತ ಸಾಧಿಸಲು ಹೊರಟಿರುವವರು. ಹೀಗಿರುವಾಗ ಕರ್ನಾಟಕದಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆಯುವ ಒಂದು ಪ್ರಾದೇಶಿಕ ಪಕ್ಷದ ಅಸ್ಥಿತ್ವ ಬಲಗೊಳ್ಳುವುದು ಅವರಿಗೆ ಬೇಕು. ಅದರಲ್ಲೂ ಮಾಜಿ ಪ್ರಧಾನಿಯೊಬ್ಬರ ಪಕ್ಷದ ಜೊತೆ ಒಪ್ಪಂದ ಒಳ್ಳೆಯದೇ. ಹೀಗಾಗಿ ಫಂಡಿಂಗ್ ವಿಚಾರ ಸತ್ಯವಿರಬಹುದು ಅನ್ನಲಾಗಿತ್ತು.

ಇತ್ತೀಚೆಗೆ ತೆಲಂಗಾಣ ಮುಖ್ಯಮಂತ್ರಿ ಕೆ.ಸಿ. ಚಂದ್ರಶೇಖರರಾವ್ ಮತ್ತು ಹೆಚ್.ಡಿ.ಕುಮಾರಸ್ವಾಮಿ ನಡುವಿನ ಬಾಂಧವ್ಯ ಗಟ್ಟಿಗೊಂಡಿರುವುದರ ಹಿಂದೆ ದಳಪತಿಗಳ ‘ಎಲೆಕ್ಷನ್ ಫಂಡ್ ‘ ಲೆಕ್ಕಾಚಾರವಿದೆ. ತೆಲಂಗಾಣ ರಾಷ್ಟ್ರ ಸಮಿತಿಯನ್ನು ಭಾರತ ರಾಷ್ಟ್ರ ಸಮಿತಿಯನ್ನಾಗಿ ಪರಿವರ್ತಿಸಿ ಹೊಸ ಪಕ್ಷ ಘೋಷಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಏಕೈಕ ಇತರೆ ರಾಜ್ಯದ ಪ್ರಾದೇಶಿಕ ಪಕ್ಷಗಳ ಮಾಜಿ ಮುಖ್ಯಮಂತ್ರಿ ಅಂದರೆ ಹೆಚ್.ಡಿ.ಕುಮಾರಸ್ವಾಮಿ ಅವರಾಗಿದ್ದರು. KCR ಜತೆ ಉತ್ತಮ ಒಡನಾಟವಿದ್ದರೂ ದೇಶದ ಮುಂದಿನ ರಾಜಕೀಯ ಹೆಂಗೋ ಏನೋ ಅನ್ನುವ ಕಾರಣಕ್ಕೆ ಪ್ರಾದೇಶಿಕ ಪಕ್ಷಗಳ ಯಾವ ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿಯೂ ಆ ಕಾರ್ಯಕ್ರಮಕ್ಕೆ ಬಂದಿರಲಿಲ್ಲ.
ಕುಮಾರಸ್ವಾಮಿ ಅವರ KCR ದೋಸ್ತಿ ಹಿಂದೆ ಚುನಾವಣೆಗೆ ಫಂಡ್ ಕೇಳುವ ಲಾಭದ ಲೆಕ್ಕಾಚಾರ ಇದೆ ಎಂಬ ಮಾತು ಕೇಳಿಬಂದಿತ್ತು. ಹಿಂದೆ ಜೆಡಿಎಸ್ ಪಕ್ಷದಲ್ಲಿದ್ದ, ಈಗ ಬಿಜೆಪಿಯ ಶಾಸಕರಾಗಿರುವ ಶಿವನಗೌಡ ನಾಯಕ್ ಈ ಬಗ್ಗೆ ಬಹಿರಂಗ ಹೇಳಿಕೆ ನೀಡಿ “ಕುಮಾರಸ್ವಾಮಿ ಲಾಭ ಇಲ್ಲದೆ ಏನೂ ಮಾಡಲ್ಲ ಎಲೆಕ್ಷನ್ ಫಂಡ್ ಪಡೆಯಲು ಕೆಸಿಆರ್ ಸಂಗ ಮಾಡಿದ್ದಾರೆ” ಅಂದಿದ್ದರು.

ತೆಲಂಗಾಣ ಗಡಿಯಲ್ಲಿರುವ ರಾಜ್ಯದ ವಿಧಾನಸಭಾ ಕ್ಷೇತ್ರಗಳ ಜೆಡಿಎಸ್ ಅಭ್ಯರ್ಥಿಗಳ ಖರ್ಚನ್ನು ಕೆಸಿಆರ್ ನೋಡಿಕೊಳ್ಳುತ್ತಾರಂತೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬಂದಿತ್ತು.
ಹೇಳಿಕೇಳಿ ಕೆಸಿಆರ್ ಸಂಪನ್ಮೂಲ ಭರಿತ ರಾಜ್ಯದ ಮುಖ್ಯಮಂತ್ರಿ ಮತ್ತು ರಾಷ್ಟ್ರ ರಾಜಕಾರಣದ ಮೇಲೆ ಹಿಡಿತ ಸಾಧಿಸಲು ಹೊರಟಿರುವವರು. ಹೀಗಿರುವಾಗ ಕರ್ನಾಟಕದಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆಯುವ ಒಂದು ಪ್ರಾದೇಶಿಕ ಪಕ್ಷದ ಅಸ್ಥಿತ್ವ ಬಲಗೊಳ್ಳುವುದು ಅವರಿಗೆ ಬೇಕು. ಅದರಲ್ಲೂ ಮಾಜಿ ಪ್ರಧಾನಿಯೊಬ್ಬರ ಪಕ್ಷದ ಜೊತೆ ಒಪ್ಪಂದ ಒಳ್ಳೆಯದೇ. ಹೀಗಾಗಿ ಫಂಡಿಂಗ್ ವಿಚಾರ ಸತ್ಯವಿರಬಹುದು ಅನ್ನಲಾಗಿತ್ತು.
ಆದರೆ ಮಾಧ್ಯಮ ಸಂದರ್ಶನವೊಂದರಲ್ಲಿ ಈ ವಿಚಾರವನ್ನು HDK ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.
ಕೆಸಿಆರ್ ಹತ್ರ ನೀವು 500 ಕೋಟಿ ರೂಪಾಯಿ ಎಲೆಕ್ಷನ್ ಫಂಡ್ ಕೇಳಿದ್ರಂತೆ? ಎಂಬ ಸಂದರ್ಶಕನ ಪ್ರಶ್ನೆಗೆ “ಐನೂರು ಕೋಟಿಗೆ ಎಷ್ಟು ಸೊನ್ನೆಗಳಿರುತ್ತವೆ ಎಂಬುದೇ ನಂಗೆ ಗೊತ್ತಿಲ್ಲ, ಹಣದಲ್ಲಿ ರಾಜಕೀಯ ಮಾಡಿದವರು ನಾವಲ್ಲ” ಎಂದು ಪ್ರತಿಕ್ರಿಯಿಸಿದ್ದಾರೆ.

“ಕೆಸಿಆರ್ ಹಾಗೂ ದೇವೇಗೌಡರ ಬಾಂಧವ್ಯ 20-30 ವರ್ಷ ಹಳೆಯದು. ತೆಲಂಗಾಣ ರಾಜ್ಯ ರಚನೆಗೂ ಮುನ್ನವೇ ಮೆಹಬೂಬ್ ನಗರದಲ್ಲಿ ನಡೆದ TRS ಸಮಾವೇಶಕ್ಕೆ ದೇವೇಗೌಡರನ್ನು KCR ಆಹ್ವಾನಿಸಿದ್ದರು. ದೇವೇಗೌಡರು ಅಲ್ಲಿಗೆ ಹೋಗಿ ಬೆಂಬಲ ಕೊಟ್ಟಿದ್ದರು. ಅವರ ಜೊತೆ ಒಡನಾಟವಿದೆ. ಮತ್ತೆ ಜೆಡಿಎಸ್ ಪಕ್ಷವನ್ನು ಕರ್ನಾಟಕದಲ್ಲಿ ಅಧಿಕಾರಕ್ಕೆ ತರುವ ವಿಚಾರದಲ್ಲಿ ಅವರು ಸಾಕಷ್ಟು ಸಲಹೆ ಸೂಚನೆ ಕೊಟ್ಟಿದ್ದಾರೆ” ಎಂದು ಕುಮಾರಸ್ವಾಮಿ ಹೇಳಿದ್ದಾರೆ.

20 ತಿಂಗಳು ಉತ್ತಮ ಆಡಳಿತ ಕೊಟ್ಟಿದ್ದಿರಿ, ಅದನ್ನು ಜನರ ಮುಂದೆ ಕೊಂಡೊಯ್ಯುವಲ್ಲಿ ವಿಫಲವಾಗಿದ್ದೀರಿ, ಈ ಸಲ ನೇರ ಜನರ ಬಳಿಗೆ ಹೋಗಿ ನೀವು ಮಾಡಿದ ಮತ್ತು ಮಾಡಲಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಹೇಳಿ ಅಂತ KCR ನನಗೆ ಹೇಳಿದರು. ತೆಲಂಗಾಣದಲ್ಲಿ ಅವರು ದಲಿತರು, ಹಿಂದುಳಿದವರಿಗಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಅದೇ ಮಾದರಿಯನ್ನು ನಾವು ಅಳವಡಿಸಿಕೊಳ್ಳುವ ಬಗ್ಗೆ ಚರ್ಚೆಯಾಗಿದೆ ಎಂದು ಫಂಡಿಂಗ್ ಬೇಡಿಕೆ ವಿಚಾರ ಅಲ್ಲಗೆಳೆದಿದ್ದಾರೆ.
ಇನ್ನು ಈ ಬಗ್ಗೆ ಆರೋಪ ಮಾಡಿರುವ ಶಿವನಗೌಡ ನಾಯಕ್ ಅವರಿಗೆ ತಿರುಗೇಟು ನೀಡಿರುವ ಕುಮಾರಸ್ವಾಮಿ, “2008 ರಲ್ಲಿ ಆತನಿಗೆ ಹಾಕಿಕೊಳ್ಳಲು ನೆಟ್ಟಗಿನ ಬಟ್ಟೆ ಇರಲಿಲ್ಲ. ನಮ್ಮ ಕಾರ್ಯಕರ್ತರೊಬ್ಬರಿಗೆ ಹೇಳಿ ನಾಲ್ಕು ಜೊತೆ ಬಟ್ಟೆ ಕೊಡಿಸಿ, ಜೆಡಿಎಸ್ ಟಿಕೆಟ್ ಕೊಟ್ಟು ಹಣವನ್ನೂ ಕೊಟ್ಟು ಶಾಸಕರನ್ನಾಗಿ ಮಾಡಿದ್ದೆವು. ಈಗ ಆತ ನನ್ನ ಬಗ್ಗೆ ಮಾತನಾಡುತ್ತಾನೆ. ಈ ಸಲ ಗೆದ್ದು ತೋರಿಸಲಿ” ಎಂದು ಕಿಡಿಕಾರಿದ್ದಾರೆ .

ಒಟ್ಟಾರೆ KCR-HDK ದೋಸ್ತಿ ರಾಜ್ಯದ ಗಡಿ ಜಿಲ್ಲೆಗಳ ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್, ಬಿಜೆಪಿ ಹಾಲಿ ಶಾಸಕರ ವಲಯದಲ್ಲಿ ಸಂಚಲನ ಸೃಷ್ಟಿಸಿರುವುದು ಸುಳ್ಳಲ್ಲ.