-ಡಾ.ಚಿ.ನಾ.ರಾಮು
ದಲಿತ ಹೋರಾಟ ಪ್ರಸ್ತುತ ದಿಕ್ಕು ತಪ್ಪಿದ ನೌಕೆಯಂತಾಗಿದೆ. ದಲಿತ ಸಂಘಟನೆಗಳ ಕೂಗು ಸರ್ಕಾರದ ಕಿವಿಗೆ ತಲುಪದಷ್ಟು ಕ್ಷೀಣವಾಗಿದೆ. ಮೀಸಲು ಕ್ಷೇತ್ರಗಳಿಂದ ಆಯ್ಕೆಯಾದ ರಾಜಕೀಯ ನಾಯಕರ ದಲಿತ ವಿರೋಧಿ ಮನೋಭಾವಕ್ಕೆ ದಲಿತ ಹೋರಾಟ ನಿರ್ವೀರ್ಯವಾಗಿರುವುದೇ ಕಾರಣ ಎಂಬುವುದರಲ್ಲಿ ಯಾವುದೇ ಸಂಶಯ ಉಳಿದಿಲ್ಲ. ಹಾಗೆಂದು ಭವಿಷ್ಯದ ಬಗ್ಗೆಯೂ ಭರವಸೆ ಇಟ್ಟುಕೊಳ್ಳುವಂತಿಲ್ಲ. ಶಿಕ್ಷಣಕ್ಕಾಗಿ ನಗರಗಳಿಗೆ ಬಂದು ಹಾಸ್ಟೆಲ್ಗಳಲ್ಲಿ ವಾಸ್ತವ್ಯ ಹೂಡುವ ವಿದ್ಯಾರ್ಥಿಗಳು ಅರೆಬೆಂದ ಹೋರಾಟಗಳಿಗೆ ಬಿದ್ದು ಶಿಕ್ಷಣ ಮೊಟಕು ಮಾಡಿಕೊಳ್ಳುವುದು, ಪೂರೈಸಿದರೂ ಉತ್ತಮ ಅಂಕ ತೆಗೆದುಕೊಳ್ಳಲಾಗದೆ ಮೀಸಲಾತಿ ರೇಸ್ನಲ್ಲಿ ಬಲಿತ ದಲಿತ ಮಕ್ಕಳ ಮುಂದೆ ಮಂಡಿಯೂರುವಂತಾಗಿದೆ.
ಶಿಕ್ಷಣ, ಸ್ಥಾನಮಾನ ಪಡೆಯದೆ ಸಾಮಾಜಿಕ ವ್ಯವಸ್ಥೆಯಲ್ಲಿ ಮನ್ನಣೆ ಪಡೆಯಲು ಸಾಧ್ಯವಿಲ್ಲ. ಇದಕ್ಕೆ ಬೇಕಾದ ಹಕ್ಕುಗಳನ್ನು ಬಾಬಾಸಾಹೇಬ್ರವರು ಸಂವಿಧಾನಾತ್ಮಕವಾಗಿಯೇ ದೊರಕಿಸಿಕೊಟ್ಟಿದ್ದಾರೆ. ಆದರೆ ಈ ಸಿದ್ಧಾಂತವನ್ನು ಯುವಕರ ತಲೆಗೆ ಹತ್ತಿಸದೆ ಕೇವಲ ತಮ್ಮ ಸ್ವಾರ್ಥಕ್ಕಾಗಿ ನಾಯಕರು ಅವರನ್ನು ಬಳಸಿಕೊಳ್ಳುತ್ತಿದ್ದಾರೆ. ಗ್ರಾಮಗಳಿಂದ ಶಿಕ್ಷಣಕ್ಕಾಗಿ ಪೇಟೆಗೆ ಬರುವ ದಲಿತ ಮಕ್ಕಳನ್ನು ಹೋರಾಟದ ಹೆಸ ರಿನಲ್ಲಿ ಅಡ್ಡ ಹಾದಿ ಹಿಡಿಸಿ ಹಾಳುಗೆಡವಲಾಗುತ್ತಿದೆ.
ಕರ್ನಾಟಕ ಎಂದರೆ ಚಳವಳಿಗಳ ತವರು. ಕಾಲಕಾಲಕ್ಕೆ ಅನೇಕ ಹೋರಾಟಗಳು ಈ ಮಣ್ಣಿನಲ್ಲಿ ಹುಟ್ಟಿವೆ. ಭಾಷಾ ಚಳವಳಿಯಿಂದ ಹಿಡಿದು ಸಾಮಾಜಿಕ ಚಳವಳಿಯವರೆಗೆ ವ್ಯವಸ್ಥೆಯ ವಿರುದ್ಧ ಸೆಟೆದುನಿಂತ ಅನೇಕ ಹೋರಾಟಗಳನ್ನು ನಾವು ಕಾಣಬಹುದಾಗಿದೆ. ನಾಡಿನ ಯಾವುದಾದರೂ ಒಂದು ಭಾಗದಲ್ಲಿ ಹುಟ್ಟಿ ಇಡೀ ರಾಜ್ಯಕ್ಕೆ ಹರಡಿ ಜನ ಸಮುದಾಯಗಳನ್ನು ಈ ಚಳವಳಿಗಳು ಸೆಳೆದಿವೆ. ನಾಡಿನಲ್ಲಿ ಹುಟ್ಟಿದ ಪ್ರತಿ ಚಳವಳಿಯ ಹಿಂದೆಯೂ ರೋಚಕ ಇತಿಹಾಸವಿದೆ. ರೈತ ಚಳವಳಿ, ಸಮಾಜವಾದಿ ಚಳವಳಿ, ಸಾಹಿತ್ಯ ಚಳವಳಿ, ಭಾಷಾ ಚಳವಳಿ, ಮಹಿಳಾ ಚಳವಳಿ, ಮಾರ್ಕ್ಸ್ ವಾದಿ ಚಳವಳಿ, ಪರಿಸರ, ಕಾರ್ಮಿಕ ಚಳವಳಿಗಳು ಕರುನಾಡಿನ ಪ್ರಮುಖ ಸಾಮಾಜಿಕ ಚಳವಳಿಗಳೆಂದು ಗುರುತಿಸಲ್ಪಟ್ಟಿವೆ. ಆದರೆ ದಲಿತ ಚಳವಳಿಯ ನಂತರ ಇಲ್ಲಿನ ಸಾಮಾಜಿಕ ಚಳವಳಿಗಳ ಸ್ವರೂಪಗಳೇ ಬದಲಾಗಿದ್ದನ್ನು ನಾವು ಗುರುತಿಸಬಹುದಾಗಿದೆ.
70ರ ದಶಕ ನಾಡಿನ ಹಲವು ಹೋರಾಟಗಳ ಹುಟ್ಟಿಗೆ ಕಾರಣವಾದ ಕಾಲಘಟ್ಟ. ಇದೇ ಕಾಲಘಟ್ಟದಲ್ಲಿಯೇ ದಲಿತ ಚಳವಳಿಯ ಉಗಮವಾಯಿತು. ಅನಂತರ ಕಂಡುಬಂದ ಚಳವಳಿಗಳ ಮೇಲೆ ಗಾಢ ಪ್ರಭಾವ ಬೀರಿತು. ಇಂತಹ ದಲಿತ ಚಳವಳಿ ಏಕೆ ಮತ್ತು ಹೇಗೆ ದಿಕ್ಕು ತಪ್ಪಿತು? ಇದಕ್ಕೆ ಕಾರಣ ಯಾರು? ಈ ಪ್ರಶ್ನೆಗಳಿಗೆ ನಿರ್ಭಯವಾಗಿ ಉತ್ತರ ಕೊಡುವವರು ಕೆಲವೇ ಮಂದಿ. ಸತ್ಯ ನುಡಿಯುವವರು ಅಪರೂಪ. ಇಂತಹ ಸತ್ಯವನ್ನು ಇಂದಿನ ಯುವಕರಿಗೆ ತಿಳಿಸಬೇಕಾದ ಬಾಧ್ಯತೆ ನಮ್ಮ ಮೇಲಿದೆ.

ದಲಿತ ಚಳವಳಿಯ ಉಗಮ:
ದಲಿತ ಚಳವಳಿಗೆ ಭದ್ರ ಬುನಾದಿ ಹಾಕಿದ್ದು `ಬೂಸಾ ಚಳವಳಿ’.1973ರಲ್ಲಿ ಜಾತಿ ವಿನಾಶ ಸಮ್ಮೇಳನ ಮೈಸೂರಿನಲ್ಲಿ ನಡೆಯಿತು. ರಾಷ್ಟ್ರಕವಿ ಕುವೆಂಪು ಅವರು ಈ ಸಮ್ಮೇಳನ ಉದ್ಘಾಟಿಸಿ ಪುರೋಹಿತಶಾಹಿ ವ್ಯವಸ್ಥೆಯನ್ನು ಕಟುವಾಗಿ ಟೀಕಿಸಿದರು. ಸಮಾರೋಪ ಭಾಷಣ ಮಾಡಿದ ಅಂದಿನ ಪೌರಾಡಳಿತ ಸಚಿವ ಬಿ.ಬಸವಲಿಂಗಪ್ಪ ಅವರು ಇಡೀ ಕನ್ನಡ ಸಾಹಿತ್ಯವನ್ನು `ಬೂಸಾ ಸಾಹಿತ್ಯ’ ಎಂದು ಲೇವಡಿ ಮಾಡಿದರು.
ಕನ್ನಡ ಸಾಹಿತ್ಯವನ್ನಷ್ಟೆ ಅಧ್ಯಯನ ಮಾಡುವುದರಿಂದ ವಿಶಾಲ ತಳಹದಿಯ ಬೌದ್ಧಿಕತೆ ಸಾಧ್ಯವಿಲ್ಲ. ಇಂಗ್ಲಿಷ್ ಸಾಹಿತ್ಯ ಓದುವ ಮೂಲಕ ದಲಿತ ಯುವಕರು ಜಾಗತಿಕ ವಿಚಾರಧಾರೆಗಳನ್ನು ಮೈಗೂಡಿಸಿಕೊಳ್ಳಬೇಕು. ಅಂಬೇಡ್ಕರ್ ಜ್ಞಾನದ ಮೇರುಪರ್ವತವಾಗಿ ಬೆಳೆಯಲು ಇಂಗ್ಲಿಷ್ ಸಾಹಿತ್ಯವೇ ಕಾರಣ ಎಂಬ ಸಂದೇಶ ಬಸವಲಿಂಗಪ್ಪನವರ ಮಾತಿನಲ್ಲಿತ್ತೇನೋ; ಆದರೆ ಕೆಲ ಸಂಕುಚಿತ ಮನಸ್ಸುಗಳು ಅವರ ಮಾತಿಗೆ ಬೇರೆಯದೇ ಅರ್ಥ ಕಲ್ಪಿಸಿದವು. ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಸಾಹಿತ್ಯವನ್ನು ಬಸವಲಿಂಗಪ್ಪ ಅವಮಾನಿಸಿದ್ದಾರೆ ಎಂದು ಬಿಂಬಿಸಲಾಯಿತು. ಅವರ ಹೇಳಿಕೆಯನ್ನು ರಾಜಕೀಯಗೊಳಿಸಲಾಯಿತು. ಬಸವಲಿಂಗಪ್ಪ ಅವರನ್ನು ರಾಜಕೀಯವಾಗಿ ಮಟ್ಟ ಹಾಕುವ ಸಂಚು ನಡೆಯಿತು. ಇದು ದಲಿತರ ಸ್ವಾಭಿಮಾನವನ್ನು ಬಡಿದೆಬ್ಬಿಸಿ ಹೋರಾಟಕ್ಕೆ ಪ್ರೇರೇಪಿಸಿತು. ಈ ಹೋರಾಟ ಕನ್ನಡ ಸಾಹಿತ್ಯ ಚಳವಳಿಯ ಮೇಲೆ ಹಾಗೂ ಸಾಮಾಜಿಕ ಚಟುವಟಿಕೆಯ ಮೇಲೆ ಭಾರೀ ಪರಿಣಾಮ ಬೀರಿತು. ದಲಿತ-ದಲಿತೇತರರ ನಡುವಿನ ಘರ್ಷಣೆಗೂ ದಾರಿಯಾಯಿತು.
ಬಸವಲಿಂಗಪ್ಪನವರು ಅಂಬೇಡ್ಕರ್ ತತ್ವ ಚಿಂತನೆಗಳನ್ನು ಹಾಗೂ ಪ್ರಗತಿಪರ ವಿಚಾರಧಾರೆಗಳನ್ನು ಕಟುವಾಗಿ ಪ್ರತಿಪಾದಿಸುತ್ತಿದ್ದರು. ಸಚಿವರಾಗಿದ್ದರೂ ಯಾವುದೇ ಅಂಜಿಕೆ, ಅಳುಕಿಲ್ಲದೆ ತಮ್ಮ ವಿಚಾರಗಳನ್ನು ಮಂಡಿಸುತ್ತಿದ್ದರು. ಸಾಮಾಜಿಕ ವ್ಯವಸ್ಥೆಯಲ್ಲಿರುವ ಹುಳುಕುಗಳ ವಿರುದ್ಧ ಧ್ವನಿಯೆತ್ತುತ್ತಿದ್ದರು. ಅವರು ನಡೆಸುತ್ತಿದ್ದ ವೈಚಾರಿಕ ದಾಳಿಯನ್ನು ಅರಗಿಸಿಕೊಳ್ಳಲಾಗದ ಒಂದು ವರ್ಗ ಅವಕಾಶಕ್ಕಾಗಿ ಕಾದು ಕತ್ತಿ ಮಸೆಯುತ್ತಿತ್ತು. ಯಾವಾಗ ಅವರ ಬಾಯಿಂದ `ಬೂಸಾ’ ಸಾಹಿತ್ಯದ ಹೇಳಿಕೆ ಹೊರಬಿತ್ತೋ ಎಲ್ಲಾ ಶಕ್ತಿಗಳು ಒಂದಾಗಿ ಬಸವಲಿಂಗಪ್ಪ ಅವರನ್ನು ಮಟ್ಟಹಾಕಲು ಮುಂದಾದವು. ಅವರ ರಾಜೀನಾಮೆಗೆ ಒತ್ತಾಯಿಸಿ ದೊಡ್ಡಮಟ್ಟದ ಪ್ರತಿಭಟನೆಗಳು ನಡೆದವು. ಬಸವಲಿಂಗಪ್ಪ ಪರ ದಲಿತ ನಾಯಕರು ಹೋರಾಟ ಆರಂಭಿಸಿದರು.

ಪರ-ವಿರೋಧ ಪ್ರತಿಭಟನೆಗಳು ಬಿರುಸಾಗಿ ದಲಿತ-ದಲಿತೇತರರ ನಡುವಿನ ಕಾಳಗ ತಾರಕಕ್ಕೇರಿತು. ಸಾಕಷ್ಟು ಕಡೆ ದಲಿತ ಕೇರಿಗಳಿಗೆ ನುಗ್ಗಿ ದೌರ್ಜನ್ಯ, ಹಲ್ಲೆ ನಡೆಸಲಾಯಿತು. ಪರಿಶಿಷ್ಟ ವಿದ್ಯಾರ್ಥಿಗಳ ಹಾಸ್ಟೆಲ್ಗಳ ಮೇಲೂ ದಾಳಿಗಳಾದವು. ಪರಿಸ್ಥಿತಿ ವಿಷಮಿಸಿದಾಗ ಬಸವಲಿಂಗಪ್ಪ ಅವರು ಅನಿವಾರ್ಯವಾಗಿ ರಾಜೀನಾಮೆ ನೀಡುವಂತಾಯಿತು. ಕಣ್ಣ ಮುಂದೆಯೇ ಆದ ಅನ್ಯಾಯದ ವಿರುದ್ಧ ದಲಿತ ಶಕ್ತಿ ತಿರುಗಿಬಿತ್ತು. ಭದ್ರಾವತಿ ಮೈಸೂರು ಮಿನರಲ್ಸ್ ಸಂಸ್ಥೆಯ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದ ಪ್ರೊ.ಬಿ.ಕೃಷ್ಣಪ್ಪ ದಲಿತ ಸಂಘರ್ಷ ಸಮಿತಿಯನ್ನು ಹುಟ್ಟುಹಾಕಿದರು. ಅಸ್ಪೃಶ್ಯತೆ, ದೌರ್ಜನ್ಯಗಳ ವಿರುದ್ಧ ಹೋರಾಟ ಕೈಗೆತ್ತಿಕೊಂಡ ಡಿಎಸ್ಎಸ್ ಮುಂದೆ ದೊಡ್ಡದಾಗಿ ಬೆಳೆದು ಇಡೀ ರಾಜ್ಯಕ್ಕೆ ಹಬ್ಬಿತು. ಎಲ್ಲಾ ಜಿಲ್ಲೆಗಳಲ್ಲೂ ಶಾಖೆಗಳು ಆರಂಭವಾದವು. 1978ರಲ್ಲಿ ದಲಿತ ಲೇಖಕರ ಸಮಾವೇಶವೂ ನಡೆಯಿತು. ಕೋಲಾರ, ರಾಯಚೂರಿನಲ್ಲಿ ಸಂಘಟನೆ ಬಲಾಢ್ಯವಾಗಿ ಬೆಳೆಯಿತು.
ಆಂಧ್ರದ ಗದ್ದರ್, ವರವರರಾವ್ ಮತ್ತಿತರರ ಪ್ರಭಾವವಿರುವ ಗಡಿ ಭಾಗಗಳ ದಲಿತ ಯುವಕರಲ್ಲಿ ಹೋರಾಟದ ಕಿಚ್ಚು ಹತ್ತಿತು. ಡಾ.ಸಿದ್ಧಲಿಂಗಯ್ಯ, ದೇವನೂರ ಮಹಾದೇವ, ಚಂದ್ರಪ್ರಸಾದ್, ಎಂ.ಡಿ.ಗಂಗಯ್ಯ, ಬೋಳಬಂಡಪ್ಪ, ದೇವಯ್ಯ ಹರವೆ ಸೇರಿದಂತೆ ದಲಿತ ನಾಯಕರ ದೊಡ್ಡ ಪಡೆಯೇ ತಯಾರಾಯಿತು. `ಬೂಸಾ’ ಚಳವಳಿಯಿಂದ ಆರಂಭವಾದ ಹೋರಾಟ ದಲಿತ ಸಮುದಾಯವನ್ನು ಕಾಡುತ್ತಿದ್ದ ಸಾಮಾಜಿಕ ಅನಿಷ್ಟಗಳು, ಶೋಷಣೆಯ ವಿರುದ್ಧವೂ ಮುಂದುವರೆಯಿತು. ದೇವಲಾಪುರ ಹೋರಾಟ, ಚಂದಗೋಡು, ನಾಗಸಂದ್ರ ಭೂ ಹೋರಾಟ ಸೇರಿದಂತೆ ಅನೇಕ ಭೂ ಚಳವಳಿಗಳು ನಡೆದು ಸಾವಿರಾರು ಎಕರೆ ಭೂಮಿಯನ್ನು ಭೂರಹಿತರಿಗೆ ಹಂಚಲಾಯಿತು. ಹೆಂಡದ ವಿರುದ್ಧ ಜಾಗೃತಿ ಮೂಡಿಸಲಾಯಿತು.
1979ರಲ್ಲಿ ಕೋಲಾರ ಜಿಲ್ಲೆ ಹುಣಸೀಕೋಟೆಯಲ್ಲಿ ನಡೆದ ಶೇಷಗಿರಿಯಪ್ಪನ ಕಗ್ಗೊಲೆ, ಅನಸೂಯಮ್ಮ ಮೇಲಿನ ಅತ್ಯಾಚಾರ ಪ್ರಕರಣ ದಲಿತ ಚಳವಳಿಯನ್ನು ಕ್ರಾಂತಿಕಾರಿ ಹಾದಿಯತ್ತ ಹೊರಳಿಸಿತು. ಕೃಷ್ಣೇಗೌಡನೆಂಬ ಭೂಮಾಲೀಕ ಶೇಷಗಿರಿಯಪ್ಪನ ಭೂಮಿ ಲಪಟಾಯಿಸುವ ಸಲುವಾಗಿ ಆತನನ್ನು ಹತ್ಯೆಗೈದು, ಆತನ ಮಗಳು ಅನಸೂಯಮ್ಮನ ಮೇಲೆ ಅತ್ಯಾಚಾರ ನಡೆಸಿದ್ದು ಕ್ರಾಂತಿಯ ಜ್ವಾಲಾಮುಖಿ ಸ್ಫೋಟಿಸಲು ಕಾರಣವಾಯಿತು. ಡಿಎಸ್ಎಸ್ ರಾಜ್ಯಾದ್ಯಂತ ಬೃಹತ್ ಹೋರಾಟ ಸಂಘಟಿಸಿತು. “ಕೋಟಿ ಕೋಟಿ ಬಾಧೆಗಳಲ್ಲಿ.. ಲಕ್ಷಾಂತರ ನೋವುಗಳಲ್ಲಿ.. ನೀ ಹುಟ್ಟಿ ಬೆಳೆದೀಯಮ್ಮ ನನ ತಂಗಿ ಅನಸೂಯ…” ಎಂಬ ಹಾಡು ಕಟ್ಟಲಾಯಿತು. ದಲಿತ ಬರಹಗಾರರ ಕ್ರಾಂತಿ ಗೀತೆಗಳು ಹೋರಾಟಕ್ಕೆ ಶಕ್ತಿ ತುಂಬಿದವು. ಹುಣಸಿಕೋಟೆಯ ಶೇಷಗಿರಿಯಪ್ಪ ಸಮಾಧಿಯಿಂದ ವಿಧಾನಸೌಧದವರೆಗೆ ಮೂರು ದಿನಗಳ ಕಾಲ ನಡೆದುಬಂದ ಜಾಥಾ ಗುಂಡೂರಾವ್ ಸರ್ಕಾರವನ್ನು ಅಕ್ಷರಶಃ ಅಲುಗಾಡಿಸಿತು. ಮುಂದೆ ದಲಿತ, ರೈತ ಚಳವಳಿಯ ಹೊಡೆತಕ್ಕೆ 1983ರಲ್ಲಿ ಕಾಂಗ್ರೆಸ್ ಸರ್ಕಾರ ತರಗೆಲೆಯಂತೆ ಧೂಳೀಪಟವಾಯಿತು. 1983ರಲ್ಲಿ ರಾಮಕೃಷ್ಣ ಹೆಗಡೆ ನೇತೃತ್ವದ ಜನತಾ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂತು. ದಲಿತ ಚಳವಳಿ ಉಚ್ಛ್ರಾಯ ಸ್ಥಿತಿಗೆ ತಲುಪಿತು.
ಪ್ರಬಲ ದಲಿತ ಚಳವಳಿ ಹೆಗಡೆ ಸರ್ಕಾರದ ಪಾಲಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತು.1985ರ ಹೊತ್ತಿಗೆ ದಲಿತ ಚಳವಳಿಯನ್ನು ಒಡೆಯಲು ರಾಮಕೃಷ್ಣ ಹೆಗಡೆ ಸಂಚು ರೂಪಿಸಿದರು. ಡಿಎಸ್ಎಸ್ ರಾಜ್ಯ ಸಂಚಾಲಕರಾಗಿದ್ದ ದೇವನೂರ ಮಹಾದೇವ, ಡಾ.ಸಿದ್ಧಲಿಂಗಯ್ಯ, ಸಿ.ಮುನಿಯಪ್ಪ ಮತ್ತಿತರ ನಾಯಕರಿಗೆಅಧಿಕಾರದ ರುಚಿ ಹತ್ತಿಸಿದರು.
1985ರಲ್ಲಿ ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ವಿಧಾನಸೌಧ ಆವರಣದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆಗೆ ಅವಕಾಶ ಮಾಡಿಕೊಡಲಾಯಿತು. `ಸ್ವಾಭಿಮಾನಿ ದಿನ’ ಆಚರಣೆಗೆ ಒಂದು ಲಕ್ಷ ಜನ ಸೇರಿದ್ದರು. ಡಿಎಸ್ಎಸ್ನ ಬಾವುಟ, ಸಂಘದ ಚಿಹ್ನೆ ಬಿಡುಗಡೆ ಮಾಡಲಾಯಿತು. ಇದೇ ಕಾರ್ಯಕ್ರಮಕ್ಕೆ ಸರ್ಕಾರ ನೀಡಿದ ಹಣದ ವಿಚಾರವಾಗಿ ಡಿಎಸ್ಎಸ್ ನಾಯಕರ ನಡುವೆ ಕಿತ್ತಾಟ ನಡೆದು ಸಂಘಟನೆಯ ವಿಘಟನೆಗೆ ದಾರಿಯಾಯಿತು. ಈ ಹಂತದಲ್ಲೇ ಸಿದ್ಧಲಿಂಗಯ್ಯ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿದ ರಾಮಕೃಷ್ಣ ಹೆಗಡೆ ದಲಿತ ಸಂಘಟನೆಗಳಿಗೆ ಎರಡು ಲೋಕಸಭಾ ಕ್ಷೇತ್ರಗಳು, ಹತ್ತು ಮೀಸಲು ಕ್ಷೇತ್ರಗಳನ್ನು ಬಿಟ್ಟುಕೊಡುವುದಾಗಿಯೂ ಡಿಎಸ್ಎಸ್ ಜೊತೆ ಜನತಾ ಪಕ್ಷ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುವುದಾಗಿಯೂ ಹುಸಿ ಭರವಸೆ ನೀಡಿದರು.
ದೇವನೂರ ಮಹಾದೇವ ಅವರ ಸಹೋದರ ಶಿವಮಲ್ಲು ಅವರಿಗೆ ವಯಸ್ಕರ ಶಿಕ್ಷಣ ಮಂಡಳಿ ಅಧ್ಯಕ್ಷ ಹುದ್ದೆ ನೀಡುವ ಮೂಲಕ ಡಿಎಸ್ಎಸ್ ಒಡೆಯುವ ಗುತ್ತಿಗೆಯನ್ನು ದೇವನೂರರಿಗೆ ನೀಡಲಾಯಿತು. ನಂತರ ಸರ್ಕಾರದ ವಿರುದ್ಧ ಡಿಎಸ್ಎಸ್ ಮೃದುಭಾವ ತಾಳಿದ್ದಲ್ಲದೆ ದಲಿತರ ಮೇಲಿನ ದಬ್ಬಾಳಿಕೆಗಳ ವಿರುದ್ಧ ಧ್ವನಿಯೆತ್ತದೆ ಮೌನಕ್ಕೆ ಜಾರಿತು. ದೌರ್ಜನ್ಯ, ಅನ್ಯಾಯಗಳ ಬಗ್ಗೆ ಕುರುಡಾಯಿತು.
ಅಧಿಕಾರದ ರುಚಿ ಹತ್ತಿಸಿಕೊಂಡ ಸಿದ್ಧಲಿಂಗಯ್ಯ, ಸರ್ಕಾರ ನಡೆಸುವವರ ಆಸ್ಥಾನ ಕವಿಯಾದರು. ಅಧಿಕಾರಸ್ಥರ ಒಡ್ಡೋಲಗದ ರಾಜಾಶ್ರಯ ಅವರಿಗೆ ದೊರೆಯಿತು. ಮುಂದೆ ಕಾಲಕಾಲಕ್ಕೆ ಅಧಿಕಾರ ಪ್ರಾಪ್ತವಾಯಿತು.
ರಾಮಕೃಷ್ಣ ಹೆಗಡೆಯವರಿಗೆ ದಲಿತ ಸಂಘರ್ಷ ಸಮಿತಿಯನ್ನು ಅಡವಿಟ್ಟ ಸಿದ್ಧಲಿಂಗಯ್ಯ, ದೇವನೂರ ಮಹಾದೇವ ಮತ್ತಿತರರ ಧೋರಣೆಯಿಂದಲೇ ಸಂಘಟನೆ ಛಿದ್ರ ಛಿದ್ರವಾಯಿತು. ಅಧಿಕಾರದ ರುಚಿ ಹತ್ತಿಸಿಕೊಂಡ ಸಿದ್ಧಲಿಂಗಯ್ಯ, ಸರ್ಕಾರ ನಡೆಸುವವರ ಆಸ್ಥಾನ ಕವಿಯಾದರು. ಅಧಿಕಾರಸ್ಥರ ಒಡ್ಡೋಲಗದ ರಾಜಾಶ್ರಯ ಅವರಿಗೆ ದೊರೆಯಿತು. ಮುಂದೆ ಕಾಲಕಾಲಕ್ಕೆ ಅಧಿಕಾರ ಪ್ರಾಪ್ತವಾಯಿತು. ದೇವನೂರ ಮಹಾದೇವ ಸಹೋದರನಿಗೆ ಅಧಿಕಾರ ಕೊಡಿಸಿ, ತಾವೂ ದೊಡ್ಡ ಹುದ್ದೆಗಳ ಕನಸು ಕಂಡರಾದರೂ ರಾಮಕೃಷ್ಣ ಹೆಗಡೆ ತಮ್ಮ ಕಾರ್ಯ ಸಾಧಿಸುತ್ತಲೇ ನೀಡಿದ ಭರವಸೆ ಮರೆತರು.
ಚಳವಳಿಯ ಅವಸಾನದ ಆರಂಭ:

ರಾಮಕೃಷ್ಣ ಹೆಗಡೆ ಡಿಎಸ್ಎಸ್ ಮೇಲೆ ಎಂತಹ ನಿಯಂತ್ರಣ ಸಾಧಿಸಿದ್ದರೆಂದರೆ; ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರತಿಭಟನೆ, ಧರಣಿಗಳನ್ನು ರಾಜ್ಯ ಮಟ್ಟದ ನಾಯಕರೇ ಆದೇಶ ನೀಡಿ ನಿಲ್ಲಿಸುತ್ತಿದ್ದರು. ಆ ವೇಳೆ ವೇಮಗಲ್ನ ಪಕ್ಷೇತರ ಶಾಸಕರಾಗಿದ್ದ ಸಿ.ಬೈರೇಗೌಡ ಅವರ ಬಲಗೈ ಭಂಟನೊಬ್ಬ ಜಮೀನಿನ ಕೆಲಸಕ್ಕೆ ಬಂದಿದ್ದ ದಲಿತ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಆಕೆಯಿಂದ ಪ್ರತಿರೋಧ ವ್ಯಕ್ತವಾಗುತ್ತಲೇ ಡಬಲ್ ಬ್ಯಾರಲ್ ಗನ್ನಿಂದ ಸುಟ್ಟು ಕೊಂದ ಪ್ರಕರಣ ನಡೆಯಿತು. ಆ ಪ್ರಕರಣವನ್ನು ಆತ್ಮಹತ್ಯೆ ಪ್ರಕರಣವೆಂದು ಮುಚ್ಚಿಹಾಕಲಾಯಿತು. `ಪ್ರಜಾಮತ’ ಎಂಬ ಪತ್ರಿಕೆಯಲ್ಲಿ ಈ ಸಂಬಂಧ ತನಿಖಾ ವರದಿ ಪ್ರಕಟವಾಯಿತು. ದಲಿತ ಯುವಕರ ರಕ್ತ ಕುದಿಯಿತು. ಆದರೆ ಡಿಎಸ್ಎಸ್ ನಾಯಕರು ಹೋರಾಟವನ್ನು ಕೈಗೆತ್ತಿಕೊಳ್ಳಲು ಬಿಡಲಿಲ್ಲ. ಬೈರೇಗೌಡರಿಗಿದ್ದ ಹೆಗಡೆಯವರ ಕೃಪಾಕಟಾಕ್ಷವೇ ಇದಕ್ಕೆ ಕಾರಣವಾಗಿತ್ತು. ಇದರ ಬಗ್ಗೆ ಧ್ವನಿಯೆತ್ತಿದ ಡಿಎಸ್ಎಸ್ನ ವಿದ್ಯಾರ್ಥಿ ನಾಯಕರನ್ನು ಸಂಘಟನೆ ಯಿಂದಲೇ ಹೊರಹಾಕುವ ಬೆದರಿಕೆ ಹಾಕಲಾಯಿತು.
ಮುಂದೆ ತಮಗೆ ಯಾವ ಅನುಕೂಲವಾಗಲಿಲ್ಲವೆಂಬ ಕಾರಣಕ್ಕೆ ಎರಡು ವರ್ಷದ ನಂತರ ಬೈರೇಗೌಡರ ವಿರುದ್ಧ ಇದೇ ನಾಯಕರು ದೊಡ್ಡ ಮೆರವಣಿಗೆಯೊಂದನ್ನು ನಡೆಸಿದರು. ಚಳವಳಿ ಅಡ್ಡ ಹಾದಿಗೆ ಹೊರಳಿದ ಸ್ಪಷ್ಟ ಲಕ್ಷಣಗಳು ಬಹಿರಂಗವಾದವು. ಮತ್ತೊಂದು ಕಡೆ ಶೇಷಗಿರಿಯಪ್ಪ ಪ್ರಕರಣದ ಅನಸೂಯಮ್ಮ ದಲಿತ ನಾಯಕರ ಮುಖವಾಡಗಳನ್ನು ಸಂಪೂರ್ಣ ಕಳಚಿದರು. “ಯಾವನೋ ಒಬ್ಬ ಕಾಮುಕ ನನ್ನನ್ನು ಒಂದು ದಿನ ಅತ್ಯಾಚಾರ ಮಾಡಿದ. ಆದರೆ ನೀವು ತಂಗಿ.. ತಂಗಿ… ಎನ್ನುತ್ತಾ ಹಗಲೆಲ್ಲಾ ಓಡಾಡಿ ರಾತ್ರಿ ನನ್ನನ್ನು ದೈಹಿಕವಾಗಿ ಬಳಸಿಕೊಂಡಿರಿ” ಎಂದು ಗೋಳಿಟ್ಟಿದ್ದು ಡಿಎಸ್ಎಸ್ ನಾಯಕರ ಕಚ್ಚೆ ಹರುಕತನವನ್ನು ಎತ್ತಿ ತೋರಿಸಿತು. ಸಂಘಟನೆಯಲ್ಲಿದ್ದವರ ನಂಬಿಕೆಗಳನ್ನು ಛಿದ್ರಗೊಳಿಸಿತು. ಮುಂದೆ ಇದೇ ದಲಿತ ನಾಯಕರು ಪಾಪ ಪ್ರಾಯಶ್ಚಿತ್ತಕ್ಕಾಗಿ ನಂದಿ ಬೆಟ್ಟದಲ್ಲಿ ಸಭೆ ಸೇರಿ ಬಾಡೂಟದೊಂದಿಗೆ ಪಾನಮತ್ತರಾಗಿ ತಮ್ಮ ಚಪ್ಪಲಿಗಳಿಂದ ತಮಗೇ ಹೊಡೆದುಕೊಂಡು ಗೋಳಿಟ್ಟ ಸುದ್ದಿ ಎಲ್ಲೆಡೆ ಹಬ್ಬಿತ್ತು. ಅತ್ತ ಅನಸೂಯಮ್ಮ ಬೆಂಗಳೂರಿನ ಕೆ.ಆರ್.ಪುರ ಮಾರುಕಟ್ಟೆ ಬಳಿ ಹೂವು ಮಾರುತ್ತ ಬದುಕುತ್ತಿದ್ದವಳು ಕೊನೆಗೊಂದು ದಿನ ತನ್ನ ಜೀವನದ ಮೇಲೆ ಜಿಗುಪ್ಸೆ ಹುಟ್ಟಿ ರೈಲಿಗೆ ತಲೆಕೊಟ್ಟು ಸತ್ತಳು.
ಡಿಎಸ್ಎಸ್ ನಾಯಕರ ಅಧಿಕಾರದ ದಾಹದಿಂದ ಸಂಘಟನೆ ಬಲಿಯಾದರೂ ಕೆಲವರು ಚಳವಳಿಗಳ ವಿಘಟನೆ ಸಹಜಕ್ರಿಯೆ ಎಂದು ಈಗಲೂ ಹಲುಬುತ್ತಾರೆ. ಮಾನ್ಯ ಸಿದ್ಧಲಿಂಗಯ್ಯನವರಂತೂ ಮನಬಂದಂತೆ ಮಿಥ್ಯ ನುಡಿಯುತ್ತಾರೆ. ಬಿ.ಬಸವಲಿಂಗಪ್ಪನವರು `ಬೂಸಾ ಸಾಹಿತ್ಯ’ ಹೇಳಿಕೆಯ ನಂತರ ತಮ್ಮನ್ನು ಖುದ್ದಾಗಿ ಕರೆದು, ‘ನನ್ನ ಪರ ಮೆರವಣಿಗೆ-ಪ್ರತಿಭಟನೆ ಮಾಡಿ’ ಎಂದು ಕೇಳಿಕೊಂಡಿದ್ದರು. ಇದರಿಂದ ನಾವೆಲ್ಲಾ ಒಂದಾಗಿ ಪ್ರತಿಭಟನೆಗೆ ಇಳಿದೆವು ಎಂದು ಹೇಳಿಕೊಂಡು ತಿರುಗುತ್ತಾರೆ. ಬಿ.ಬಸವಲಿಂಗಪ್ಪನವರ ಮೇರು ವ್ಯಕ್ತಿತ್ವ ಕಂಡವರಿಗೆ ಅವರ ಮಾತುಗಳು ಜೋಕ್ ಆಗಿ ಕಾಣಿಸುತ್ತವೆ. ದಲಿತ ಸಂಘಟನೆಗಳು ಒಡೆದು ಚೂರು ಚೂರುಗಳಾಗಿ ನಾಯಕರ ಸ್ವಾರ್ಥ ಪರತೆಯಿಂದ ದಲಿತ ಹೋರಾಟವೇ ದಿಕ್ಕು ತಪ್ಪಿರುವುದು ನೋವು ತರಿಸುತ್ತದೆ. ದಲಿತರ ಹತ್ಯಾಕಾಂಡ, ಸಾಮೂಹಿಕ ಬಹಿಷ್ಕಾರ, ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ಬಾಧೆ ತರಿಸುತ್ತವೆ.
ಹಳಿ ತಪ್ಪಿದ ಸ್ಥಿತಿ:
ದಲಿತ ಹೋರಾಟ ಪ್ರಸ್ತುತ ದಿಕ್ಕು ತಪ್ಪಿದ ನೌಕೆಯಂತಾಗಿದೆ. ದಲಿತ ಸಂಘಟನೆಗಳ ಕೂಗು ಸರ್ಕಾರದ ಕಿವಿಗೆ ತಲುಪದಷ್ಟು ಕ್ಷೀಣವಾಗಿದೆ. ಕಂಬಾಲಪಲ್ಲಿ ಹತ್ಯಾಕಾಂಡದಂತಹ ಪ್ರಕರಣ ನಡೆದಾಗ ದಲಿತ ನಾಯಕರೆನಿಸಿಕೊಂಡ ಮಲ್ಲಿಕಾರ್ಜುನ ಖರ್ಗೆ ಗೃಹ ಮಂತ್ರಿ ಸ್ಥಾನದಲ್ಲಿದ್ದರೂ ದಿಟ್ಟ ಕ್ರಮ ಕೈಗೊಳ್ಳದೆ ದಲಿತರ ಸ್ವಾಭಿಮಾನ, ಹಿತಾಸಕ್ತಿಯನ್ನು ಅಡವಿಟ್ಟು ಅಧಿಕಾರ ಅನುಭವಿಸುತ್ತಾರೆ. ಮತ್ತೊಬ್ಬ ದಲಿತ ನಾಯಕ ಕೆ.ಎಚ್.ಮುನಿಯಪ್ಪ ಘಟನೆ ನಡೆದ ಸ್ಥಳಕ್ಕೆ ಹೋಗಿ ಸಂತ್ರಸ್ತರ ನೋವು ಆಲಿಸಿ ಸಾಂತ್ವನ ಹೇಳದೆ ಚಿಂತಾಮಣಿ ಸರ್ಕಾರಿ ಐಬಿಯಲ್ಲಿ ಬಿಸ್ಕೆಟ್ನೊಂದಿಗೆ ಚಹಾ ಹೀರಿ ವಾಪಸ್ ಬರುತ್ತಾರೆ.
ಮೀಸಲು ಕ್ಷೇತ್ರಗಳಿಂದ ಆಯ್ಕೆಯಾದ ರಾಜಕೀಯ ನಾಯಕರ ಇಂತಹ ದಲಿತ ವಿರೋಧಿ ಮನೋಭಾವಕ್ಕೆ ದಲಿತ ಹೋರಾಟ ನಿರ್ವೀರ್ಯವಾಗಿರುವುದೇ ಕಾರಣ ಎಂಬುವುದರಲ್ಲಿ ಯಾವುದೇ ಸಂಶಯ ಉಳಿದಿಲ್ಲ. ಹಾಗೆಂದು ಭವಿಷ್ಯದ ಬಗ್ಗೆಯೂ ಭರವಸೆ ಇಟ್ಟುಕೊಳ್ಳುವಂತಿಲ್ಲ. ದಲಿತ ಹೋರಾಟಗಾರರು ಎಂದು ಸ್ವಯಂಘೋಷಿಸಿಕೊಂಡಿರುವವರು ತಮ್ಮದೇ ಯುವಕರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಶಿಕ್ಷಣ, ಸಂಘಟನೆ, ಹೋರಾಟ ಎಂಬ ಅಂಬೇಡ್ಕರ್ ಮೂಲ ಸಿದ್ಧಾಂತವನ್ನು ಗಾಳಿಗೆ ತೂರಿ ಪ್ರತಿ ಮಾತಿಗೂ ಇವರು ಅಂಬೇಡ್ಕರ್ ಅವರ ಹೆಸರು ಬಳಸುವುದು ಹಾಸ್ಯಾಸ್ಪದವಾಗಿ ಕಾಣುತ್ತದೆ.
ಶಿಕ್ಷಣಕ್ಕಾಗಿ ನಗರಗಳಿಗೆ ಬಂದು ಹಾಸ್ಟೆಲ್ಗಳಲ್ಲಿ ವಾಸ್ತವ್ಯ ಹೂಡುವ ವಿದ್ಯಾರ್ಥಿಗಳು ಅರೆಬೆಂದ ಹೋರಾಟಗಳಿಗೆ ಬಿದ್ದು ಶಿಕ್ಷಣ ಮೊಟಕು ಮಾಡಿಕೊಳ್ಳುವುದು, ಪೂರೈಸಿದರೂ ಉತ್ತಮ ಅಂಕ ತೆಗೆದುಕೊಳ್ಳಲಾಗದೆ ಮೀಸಲಾತಿ ರೇಸ್ನಲ್ಲಿ ಬಲಿತ ದಲಿತ ಮಕ್ಕಳ ಮುಂದೆ ಮಂಡಿಯೂರುವಂತಾಗಿದೆ.
ಶಿಕ್ಷಣ, ಸ್ಥಾನಮಾನ ಪಡೆಯದೆ ಸಾಮಾಜಿಕ ವ್ಯವಸ್ಥೆಯಲ್ಲಿ ಮನ್ನಣೆ ಪಡೆಯಲು ಸಾಧ್ಯವಿಲ್ಲ. ಇದಕ್ಕೆ ಬೇಕಾದ ಹಕ್ಕುಗಳನ್ನು ಬಾಬಾಸಾಹೇಬ್ರವರು ಸಂವಿಧಾನಾತ್ಮಕವಾಗಿಯೇ ದೊರಕಿಸಿಕೊಟ್ಟಿದ್ದಾರೆ. ಆದರೆ ಈ ಸಿದ್ಧಾಂತವನ್ನು ಯುವಕರ ತಲೆಗೆ ಹತ್ತಿಸದೆ ಕೇವಲ ತಮ್ಮ ಸ್ವಾರ್ಥಕ್ಕಾಗಿ ನಾಯಕರು ಅವರನ್ನು ಬಳಸಿಕೊಳ್ಳುತ್ತಿದ್ದಾರೆ. ಗ್ರಾಮಗಳಿಂದ ಶಿಕ್ಷಣಕ್ಕಾಗಿ ಪೇಟೆಗೆ ಬರುವ ದಲಿತ ಮಕ್ಕಳನ್ನು ಹೋರಾಟದ ಹೆಸ ರಿನಲ್ಲಿ ಅಡ್ಡ ಹಾದಿ ಹಿಡಿಸಿ ಹಾಳುಗೆಡವಲಾಗುತ್ತಿದೆ.
ಬಡ ಮಕ್ಕಳ ಕೈಗೆ ಬಾವುಟ ನೀಡಿ ಬೀದಿಗಿಳಿಸುವ ನಾಯಕರ ಮಕ್ಕಳು ಪ್ರತಿಷ್ಠಿತ ಕಾಲೇಜುಗಳಲ್ಲಿ ಓದಿ ಕೈ ತುಂಬಾ ಮಾರ್ಕ್ಸು ತೆಗೆದುಕೊಂಡು ಮೀಸಲಾತಿ ಏಣಿ ಬಳಸಿ ಮೇಲೇರುತ್ತಿದ್ದಾರೆ. ಅವರೆದುರು ಸ್ಪರ್ಧೆ ಕೊಡಲಾರದೆ ಇದೇ ಬಡ ದಲಿತ ಮಕ್ಕಳು ಇವರ ಹಿಂದೆ ಬಿದ್ದು ಬದುಕು ನಾಶ ಮಾಡಿಕೊಳ್ಳುತ್ತಿದ್ದಾರೆ.
ನಿರುದ್ಯೋಗವೂ ಹೊಸ ಹೊಸ ದಲಿತ ಸಂಘಟನೆಗಳು ಹುಟ್ಟಿಗೆ ಕಾರಣವಾಗುತ್ತಿರಬಹುದು ಎನಿಸುತ್ತದೆ. ಹೊಟ್ಟೆಪಾಡಿಗಾಗಿ ಅಂಬೇಡ್ಕರ್ ಬೋರ್ಡ್ ಹಾಕಿ ಭೂ ವಿವಾದಗಳಿಗೆ ತಲೆ ಹಾಕುವುದು, ಅಟ್ರಾಸಿಟಿ ಬೆದರಿಕೆ ಹಾಕುವ ಸಂಘಟನೆಗಳೂ ಉಂಟು. ಬಾಬಾಸಾಹೇಬರ ಆಶಯಗಳಿಗೆ ನೇಣು ಹಾಕುವ ಕಾಲಘಟ್ಟಕ್ಕೆ ನಾವು ಬಂದು ನಿಂತಿದ್ದೇವೆ. ಮುಂದಿನ ದಾರಿಯಲ್ಲಿ ಅಂಧಕಾರವೇ ತುಂಬಿದೆ. ಆ ಅಂಬೇಡ್ಕರರೇ ಮುಂದಿನ ದೀವಿಗೆಯಾಗಿ ಬರಬೇಕೇನೋ ಅನಿಸುತ್ತದೆ.
(ಲೇಖಕರು ‘ಬಲಿತ ದಲಿತರ ತುಳಿತ: ನನ್ನ ಜನ ಅನಾಥ’ ಕೃತಿ ರಚಿಸಿದ್ದಾರೆ; `ದಲಿತ ಕೆನೆಪದರ ಮೀಸಲಾತಿ’ಯ ಪ್ರಬಲ ಪ್ರತಿಪಾದಕರು)