ಶೋಭಾ ಗುನ್ನಾಪೂರ ಅವರ ‘ಭೂಮಿಯ ಋಣ’ ಕೃತಿ ಲೋಕಾರ್ಪಣೆ
-ಶೌರ್ಯ ಡೆಸ್ಕ್

‘ ಹೆಣ್ಣಿನ ಸಬಲತೆಯನ್ನು ಸಮಾಜ ಒಪ್ಪಿಕೊಳ್ಳಬೇಕು,ಹೆಣ್ಣು ಮಕ್ಕಳು ಸಬಲರು ಎಂದು ವ್ಯವಸ್ಥೆ ಮತ್ತು ಪ್ರಭುತ್ವ ಒಪ್ಪಿಕೊಳ್ಳುವ ಹಾಗೂ ಅದಕ್ಕೆ ಅಧಿಕೃತತೆಯನ್ನು ನೀಡುವ ಪ್ರಕ್ರಿಯೆಯೇ ಮಹಿಳಾ ಸಬಲೀಕರಣ’ ಎಂದು ವಿಮರ್ಶಕಿ ಎಂ.ಎಸ್.ಆಶಾದೇವಿ ಅಭಿಪ್ರಾಯ ಪಟ್ಟರು.
‘ಸಾಮಾಜಿಕ ನ್ಯಾಯಕ್ಕಾಗಿ ವಕೀಲರು’ ಕರ್ನಾಟಕ ಸಂಘಟನೆ ಹಾಗೂ ‘ ವೈಷ್ಣವಿ ಪ್ರಕಾಶನ ಬೆಂಗಳೂರು ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶೋಭಾ ಗುನ್ನಾಪೂರ ಅವರ ‘ಭೂಮಿಯ ಋಣ’ ಕಥಾ ಸಂಕಲನ ಬಿಡುಗಡೆ ಮಾಡಿ ಮಾತನಾಡಿದರು.
ಅನೇಕ ಪೀಳಿಗೆಯಿಂದ ಮಹಿಳೆ ಅಬಲೆಯೆಂದು ಬಿಂಬಿಸಿಕೊಂಡು ಬರಲಾಗುತ್ತಿದೆ. ಅಧುನಿಕ ಜಗತ್ತಿನಲ್ಲೂ ಮಹಿಳಾ ಸಬಲೀಕರಣದ ಬಗ್ಗೆ ನಿರಂತರ ಅಪವ್ಯಾಖ್ಯಾನ ಮಾಡಲಾಗುತ್ತಿದೆ. ಅಬಲೆಯರು ಎಂದು ತಿಳಿಯುವುದರಲ್ಲಿಯೇ ಹುನ್ನಾರವಿದೆ. ಹೆಣ್ಣನ್ನು ಹಲವು ಪಾತ್ರದಲ್ಲಿ ಹಂಚಿ, ವಯಸ್ಸು ವಿಂಗಡಿಸಲಾಗುತ್ತದೆ. ನಾನು ಯಾರು ಎಂಬ ಪ್ರಶ್ನೆ ಆಕೆಗೆ ಕಾಡುತ್ತದೆ. ಅನೇಕ ಒತ್ತಡಗಳನ್ನೂ ಹೇರಲಾಗುತ್ತಿದೆ. ಅಬಲೆಯರೆಂದು ವ್ಯಾಖ್ಯಾನದ ಬದಲು, ಹೆಣ್ಣಿನ ಸಬಲತೆಯನ್ನು ವ್ಯವಸ್ಥೆ,ಪ್ರಭುತ್ವ ಒಪ್ಪಿಕೊಳ್ಳಬೇಕು’ ಎಂದು ಹೇಳಿದರು.
‘ ಕುಗ್ರಾಮದಲ್ಲಿ ಹುಟ್ಟಿ ಬೆಳೆದು ಕಾಲೇಜು ಮೆಟ್ಟಿಲು ಹತ್ತದೆ 9 ನೇ ತರಗತಿಗೇ ಶಾಲೆ ನಿಲ್ಲಿಸಿ ಮತ್ತೊಂದು ಕುಗ್ರಾಮದ ಸೊಸೆಯಾಗಿ ಹೋದ ಶೋಭಾ ಅವರು ಓದಿನ ಪ್ರೀತಿಯಿಂದ ತಮ್ಮ ಊರಿನ ಗ್ರಂಥಾಲಯದ ಎಲ್ಲ ಪುಸ್ತಕಗಳನ್ನು ಓದಿದರು. ಅವರ ಅಷ್ಟೂ ಕಥೆಗಳು ಸಾಂಸ್ಕೃತಿಕ ಸ್ತ್ರೀ ವಾದದ ಮೇಲೆ ಕೇಂದ್ರೀಕೃತವಾಗಿದೆ. ಅವರ ವ್ಯಕ್ತಿತ್ವ ಹಾಗೂ ಅವರ ಕೃತಿಗೆ ಇರುವ ಸಂಬಂಧ ಇಂದಿನ ಮಹಿಳಾ ಕಥಾ ಸಂಕಥನವನ್ನು ಬಲಪಡಿಸಬೇಕಾದ ಆಧಾರ ನೀಡುತ್ತಿದೆ’ ಎಂದರು.
ವಿಮರ್ಶಕ ನಟರಾಜ್ ಹುಳಿಯಾರ್ ಮಾತನಾಡಿ, ‘ಹಳ್ಳಿಯ ಜೀವನದ ಅನುಭವಗಳನ್ನು ಶೋಭಾ ಅವರು ತಮ್ಮ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ ಸ್ತ್ರೀಯರ ಸಹನೆಯನ್ನು ಕಥೆಗಳು ಅನಾವರಣ ಮಾಡುತ್ತವೆ. ಇಲ್ಲಿನ ಪಾತ್ರಗಳು ನ್ಯಾಯಕ್ಕಾಗಿ ಹವಣಿಸುತ್ತಿವೆ’ ಎಂದು ತಿಳಿಸಿದರು.
ಲೇಖಕಿ ಶೋಭಾ ಗುನ್ನಾಪೂರ ‘ನನ್ನ ಜೀವನದ ಅನುಭವಗಳು ಮತ್ತು ಕಂಡ, ಅರಿವಿಗೆ ಬಂದ ಸೂಕ್ಷ್ಮ ವಿಚಾರಗಳು ಅನೇಕ ಪ್ರಶ್ನೆಗಳನ್ನ ಮೂಡಿಸಿದ್ದವು. ಅಂತಹ ವಿಚಾರಗಳನ್ನು ಕಥೆಗಳಾಗಿ ನೇಯ್ದು ಅಕ್ಷರದ ರೂಪದಲ್ಲಿ ತರುವ ಪ್ರಯತ್ನ ಮಾಡಿದ್ದೇನೆ’ ಎಂದು ಹೇಳಿದರು.
ಚಿತ್ರ ನಿರ್ದೇಶಕ ಬಿ.ಎಂ. ಗಿರಿರಾಜ್, ವಕೀಲ ಸುನಿಲ್ ಕುಮಾರ್ ಗುನ್ನಾಪೂರ, ಮುದಿರಾಜ್ ಬಾಣದ್, ಕಥೆಗಾರ ಅನಿಲ್ ಗುನ್ನಾಪೂರ, ಕೆಎಎಸ್ ಅಧಿಕಾರಿ ಶ್ರುತಿ ಬಿ.ಆರ್ ಮತ್ತಿತರರಿದ್ದರು.