ಇಂಥದ್ದೊಂದು ಸುದ್ದಿ ಕೆಲವು ತಿಂಗಳುಗಳಿಂದ ಕೇಳಿ ಬರುತ್ತಲೇ ಇತ್ತು. ನಟ ಮತ್ತು ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧನ ನಖರಾ ಜಾಸ್ತಿಯಾಗಿದೆ, ಈತನ ಕಾಟ ತಾಳಲಾರದೆ ಜೊತೆಜೊತೆಯಲಿ ತಂಡದವರು ಹೈರಾಣಾಗಿದ್ದಾರೆ, ಇವನನ್ನು ಧಾರಾವಾಹಿ ತಂಡದಿಂದ ಕಿತ್ತು ಹಾಕಿದರೆ ಆಶ್ಚರ್ಯವಿಲ್ಲ ಎಂಬ ಮಾತೊಂದು ಹರಿದಾಡುತ್ತಿತ್ತು. ಅದೀಗ ನಿಜವಾಗಿದೆ.
ಅನಿರುದ್ಧ್ ಕಾಟ ತಾಳಲಾರದೆ ಅವರನ್ನು ಜೊತೆಜೊತೆಯಲಿ ಧಾರಾವಾಹಿಯಿಂದ ಕಿತ್ತು ಹಾಕಲಾಗಿದೆ. ಈ ಕುರಿತು ಧಾರಾವಾಹಿ ತಂಡದವರು ಮತ್ತು ಜೀ ಕನ್ನಡ ವಾಹಿನಿಯವರು ಪತ್ರಿಕಾಗೋಷ್ಠಿ ಮಾಡಿ ಅಧಿಕೃತಗೊಳಿಸಿದ್ದಾರೆ. ಬರೀ ಈ ಧಾರಾವಾಹಿಯಿಂದ ಮಾತ್ರವಲ್ಲ, ಮುಂದಿನ ಎರಡು ವರ್ಷಗಳ ಕಾಲ ಅವರಿಗೆ ಯಾರೂ ಕನ್ನಡ ಕಿರುತೆರೆಯಲ್ಲಿ ಕೆಲಸ ಕೊಡಬಾರದು ಎಂಬ ಅಲಿಖಿತ ಆದೇಶವೊಂದು ಹೊರಬಿದ್ದಿದ್ದು, ಅದಕ್ಕೆ ಬೇರೆ ಧಾರಾವಾಹಿಗಳ ನಿರ್ಮಾಪಕರು ಮತ್ತು ಚಾನಲ್ನವರು ಸಹ ಒಪ್ಪಿಗೆ ನೀಡಿದ್ದಾರೆ.

ಯಾಕೋ ಧಾರಾವಾಹಿಗಳಲ್ಲಿ ನಟಿಸುತ್ತಿರುವ ನಟರ ಕಿರಿಕ್ಗಳು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಇತ್ತೀಚೆಗಷ್ಟೇ ತೆಲುಗು ಧಾರಾವಾಹಿಯೊಂದರ ಸಹಾಯಕ ನಿರ್ದೇಶಕನ ಮೇಲೆ ಆವಾಜ್ ಹಾಕುವುದಕ್ಕೆ ಹೋಗಿ ನಟ ಚಂದನ್ ಗೌಡ ತಪರಾಕಿ ತಿಂದು ಬಂದಿದ್ದರು. ಈಗ ಅನಿರುದ್ಧ ಸರದಿ. ಇದುವರೆಗೂ ಕನ್ನಡದ ಕಿರುತೆರೆಯಲ್ಲಿ ಸಮಸ್ಯೆಗಳಾದಾಗ ಸದ್ದಿಲ್ಲದೆ ಬಗೆಹರಿಸಲಾಗುತ್ತಿತ್ತು. ಕೆಲವೊಮ್ಮೆ ಅತಿಯಾದಾಗ, ನಟ-ನಟಿಯರನ್ನು ಕೈಬಿಟ್ಟು ಅವರ ಬದಲು ಬೇರೊಬ್ಬರನ್ನು ಆಯ್ಕೆ ಮಾಡಲಾಗುತ್ತಿತ್ತು. ಆದರೆ, ಇದೇ ಮೊದಲ ಬಾರಿಗೆ ನಟನ ವಿರುದ್ಧ ಧಾರಾವಾಹಿಯ ತಂಡದವರು ಮತ್ತು ಚಾನಲ್ನವರು ಒಕ್ಕೊರಲಾಗಿ ಆರೋಪ ಮಾಡಿ ಅವರನ್ನು ಮನೆಗೆ ಕಳುಹಿಸಿದ ಘಟನೆ ಕನ್ನಡ ಕಿರುತೆರೆಯಲ್ಲಿ ಇದೇ ಮೊದಲು. ಅಂಥದ್ದೊಂದು ಅಪಖ್ಯಾತಿ ಈಗ ಅನಿರುದ್ಧ್ಗೆ ಎದುರಾಗಿದೆ.
ಇಷ್ಟಕ್ಕೂ ಆಗಿದ್ದೇನು? ಅದೊಂದು ದೊಡ್ಡ ಕಥೆ. ಕೆಲವೇ ವರ್ಷಗಳ ಹಿಂದೆ ಕೆಲಸ ಸಿಕ್ಕರೆ ಸಾಕು ಎಂಬ ಸ್ಥಿತಿಯಲ್ಲಿ ಅನಿರುದ್ಧ್ ಇದ್ದರು. ಪರಿಚಯವಿದ್ದ ಚಾನಲ್ನವವರು ಮತ್ತು ನಿರ್ಮಾಪಕರಿಗೆ ಕೆಲಸ ಕೊಡಿ ಎಂದು ದುಂಬಾಲು ಬಿದ್ದಿದ್ದರು. ಯಾವಾಗ ಅದು ಸಾಧ್ಯವಾಗಲಿಲ್ಲವೋ, ಅತ್ತೆ ಭಾರತಿ ವಿಷ್ಣುವರ್ಧನ್ ಅವರಿಂದ ಎಲ್ಲರಿಗೂ ಫೋನ್ ಮಾಡಿಸಿದ್ದರು. ಅನಿರುದ್ಧ್ ಒಪ್ಪುವುದಾದರೆ ಪೋಷಕ ಪಾತ್ರಗಳು ಸಿಗುವುದು ಕಷ್ಟವಿರಲಿಲ್ಲ. ಆದರೆ, ಅವರಿಗೆ ಹೀರೋ ಪಾತ್ರಗಳೇ ಬೇಕಿತ್ತು. 40 ಪ್ಲಸ್ ಅನಿರುದ್ಧ್ಗೆ ಧಾರಾವಾಹಿಗಳಲ್ಲಿ ಹೀರೋ ಪಾತ್ರ ಸಿಗುವುದು ಅಷ್ಟು ಸುಲಭವಾಗಿರಲಿಲ್ಲ. ಕೊನೆಗೆ ಜೊತೆಜೊತೆಯಲಿ ಧಾರಾವಾಹಿಯಲ್ಲೊಂದು ಅವಕಾಶ ಸಿಕ್ಕಿತು. ಈ ಧಾರಾವಾಹಿಯ ನಾಯಕ 40 ಪ್ಲಸ್ ವಯಸ್ಸಿನವರು. ಈ ಪಾತ್ರ ಅನಿರುದ್ಧ್ಗೆ ಸರಿಯಾಗಿದೆ ಎಂಬ ಕಾರಣಕ್ಕೆ ಅವರಿಗೆ ಕೇಳಲಾಯಿತು. ಕೆಲಸವಿಲ್ಲದೆ ಕಷ್ಟಪಡುತ್ತಿದ್ದ ಅನಿರುದ್ಧ್ಗೆ ಪಾಲಿಗೆ ಬಂದಿದ್ದೇ ಪಂಚಾಮೃತವಾಯಿತು. ತಕ್ಷಣ ಒಪ್ಪಿಕೊಂಡರು. ಬೇರೆ ಭಾಷೆಯ ಧಾರಾವಾಹಿಯ ರೀಮೇಕ್ ಆದ ಜೊತೆಜೊತೆಯಲಿ ಸೆಟಪ್ ದೊಡ್ಡದು. ಇಲ್ಲಿ ನಾಯಕ ಆಗರ್ಭ ಶ್ರೀಮಂತ. ಅದನ್ನು ಸರಿಯಾಗಿ ಎಸ್ಟಾಬ್ಲಿಶ್ ಮಾಡುವುದಕ್ಕೆ ಸಾಕಷ್ಟು ಖರ್ಚು ಮಾಡಲಾಯಿತು. ನಾಯಕ ಹೆಲಿಕಾಫ್ಟರ್ನಿಂದ ಇಳಿಯುವ, ಮರ್ಸಿಡಿಸ್ ಬೆಂಜ್ನಲ್ಲಿ ಓಡಾಡುವ ದೃಶ್ಯಗಳನ್ನು ತೋರಿಸಲಾಯಿತು. ಕನ್ನಡ ಕಿರುತೆರೆಗೆ ಇವೆಲ್ಲ ಹೊಸದಾದ ಕಾರಣ, ಈ ಅದ್ಧೂರಿತನ ನೋಡಿ ಪ್ರೇಕ್ಷಕರು ಖುಷಿಯಾದರು. ಧಾರಾವಾಹಿ ಹಿಟ್ ಆಗಿದ್ದಷ್ಟೇ ಅಲ್ಲ, ನಾಯಕ ಅನಿರುದ್ಧ್ಗೂ ಜನಪ್ರಿಯತೆ ಸಿಕ್ಕಿತು.

ಇದೆಲ್ಲ ಆಗುವಷ್ಟರಲ್ಲಿ 150 ಎಪಿಸೋಡುಗಳಾಗಿದ್ದವು. ಕ್ರಮೇಣ ಜನಪ್ರಿಯತೆ ಹೆಚ್ಚಾಗುತ್ತಿದ್ದಂತೆಯೇ ಅನಿರುದ್ಧ ತಲೆ ಸಹ ತಿರುಗತೊಡಗಿತು. ಜನಪ್ರಿಯತೆ ಹೆಚ್ಚಾಗುತ್ತಿದ್ದಂತೆಯೇ ನಖರಾ ಸಹ ಹೆಚ್ಚಾಯಿತು. ಪದೇಪದೇ ತಂತ್ರಜ್ಞರ ಜತೆಗೆ ಗಲಾಟೆ ಮಾಡುವುದು, ಸೀನ್ ಬದಲಿಸಿ ಎಂದು ಹೇಳುವುದು, ಕ್ಯಾರಾವಾನ್ ಸಿಗದಿದ್ದರೆ ಶೂಟಿಂಗ್ಗೆ ಬರುವುದಿಲ್ಲ ಎಂದು ಹೆದರಿಸುವುದು ಇವೆಲ್ಲ ನಡೆದೇ ಇತ್ತು. ಆದರೆ, ಬೇರೆ ದಾರಿ ಇಲ್ಲದೆ ಧಾರಾವಾಹಿ ತಂಡದವರು ಅನಿರುದ್ಧ್ ಜತೆಗೆ ಹೊಂದಿಕೊಂಡು ಹೋಗುತ್ತಿದ್ದರು. ಇತ್ತೀಚೆಗೆ ಒಂದು ದೃಶ್ಯದ ಚಿತ್ರೀಕರಣದ ಸಂದರ್ಭದಲ್ಲಿ ಎಪಿಸೋಡ್ ನಿರ್ದೇಶಕರ ಜತೆಗೆ ಅನಿರುದ್ಧ್ಗೆ ದೊಡ್ಡ ಜಗಳವಾಗಿದೆ. ಅವರು ಅದೇ ರೀತಿ ಕೂಗಾಡಿ, ಸೀನ್ ಬದಲಿಸದಿದ್ದರೆ ಚಿತ್ರೀಕರಣಕ್ಕೆ ಬರುವುದಿಲ್ಲ ಎಂದು ಹೊರಟು ಹೋಗಿದ್ದಾರೆ. ಅಲ್ಲಿಯವರೆಗೂ ತಾಳ್ಮೆಯಿಂದ ಕಾದಿದ್ದ ನಿರ್ಮಾಪಕ-ನಿರ್ದೇಶಕ ಆರೂರು ಜಗದೀಶ್, ಇನ್ನು ಅನಿರುದ್ಧ್ ಸಹವಾಸ ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಅವರು ಹೋದರೆ ಹೋಗಲಿ, ಬೇರೆ ಮಾರ್ಗ ಹುಡುಕಿದರೆ ಆಯ್ತು ಎಂದು ಅನಿರುದ್ಧ್ಗೆ ತಂಡದಿಂದ ಖಾಯಂ ಆಗಿ ಗೇಟ್ಪಾಸ್ ಕೊಟ್ಟಿದ್ದಾರೆ.
ಅಲ್ಲಿಗೆ ಅನಿರುದ್ಧ್ ಪುನಃ ನಿರುದ್ಯೋಗಿಯಾಗಿದ್ದಾರೆ. ಇನ್ನು, ಕೆಲವು ದಿನಗಳ ಕಾಲ ಅವರನ್ನು ಜೊತೆಜೊತೆಯಲಿ ಧಾರಾವಾಹಿಯಲ್ಲಿ ಅವರನ್ನು ನೋಡಬಹುದು. ಆ ನಂತರ ಅವರ ಬದಲಿಗೆ ಬೇರೊಬ್ಬ ಕಲಾವಿದ ಬರಬಹುದು ಅಥವಾ ಆ ಪಾತ್ರವೇ ಸಾಯಬಹುದು. ಅದೇನಾದರೂ ಇರಲಿ, ಆದರೆ ಅನಿರುದ್ಧ್ ಅತಿಯಾದ ದುರಹಂಕಾರದಿಂದ ಹೀಗೆ ಮಾಡಬಾರದಾಗಿತ್ತು ಎಂದು ಅವರ ಅಭಿಮಾನಿ ವಲಯದಲ್ಲೇ ಸಾಕಷ್ಟು ಮಾತುಗಳು ಕೇಳಿಬರುತ್ತಿವೆ.

ಬ್ಯಾನ್ ಆದ ವಿಷ್ಣು ಅಳೀಮಯ್ಯ!
ಕಳೆದ ಒಂದೂವರೆ ವರ್ಷಗಳಿಂದ ಅವರ ಸಾಕಷ್ಟು ಉಪಟಳಗಳನ್ನು ಸಹಿಸಿದ ನಿರ್ಮಾಪಕ ಮತ್ತು ನಿರ್ದೇಶಕ ಆರೂರು ಜಗದೀಶ್, ಇನ್ನು ಸಾಧ್ಯವೇ ಇಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಕಷ್ಟವಾದರೂ ಸರಿ, ನಷ್ಟವಾದರೂ ಸರಿ … ಇನ್ನು ಅನಿರುದ್ಧ್ ಜತೆಗೆ ಕೆಲಸ ಮಾಡುವುದಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಇದರ ಪರಿಣಾಮವಾಗಿ ಅನಿರುದ್ಧ್, ಜೊತೆಜೊತೆಯಲಿ ತಂಡದಿಂದ ಹೊರಬರುವಂತಾಗಿದೆ. ಅವರು ಕೊಟ್ಟಿರುವ ಕಾಟ ನೋಡಿದರೆ, ಬರೀ ಜೊತೆಜೊತೆಯಲಿ ತಂಡದಿಂದ ಔಟ್ ಆಗಿದ್ದಷ್ಟೇ ಅಲ್ಲ, ಮುಂದಿನ ಎರಡು ವರ್ಷ ಕಾಲ ನಿರುದ್ಯೋಗಿಗಳಾದರೆ ಆಶ್ಚರ್ಯವಿಲ್ಲ. ಅನಿರುದ್ಧ್ ಮತ್ತು ಅವರಂತಹ ತರಲೆ ಗಿರಾಕಿಗಳಿಗೆ ತಕ್ಕ ಶಾಸ್ತಿ ಮಾಡಲು ನಿರ್ಧರಿಸಿರುವ ಕರ್ನಾಟಕ ಕಿರುತೆರೆ ನಿರ್ಮಾಪಕರ ಸಂಘವು, ಅವರಿಗೆ ಎರಡು ವರ್ಷ ಯಾರೂ ಕೆಲಸ ಕೊಡಬಾರದು ಎಂದು ಚಾನಲ್ ಮತ್ತು ನಿರ್ಮಾಪಕರನ್ನು ವಿನಂತಿಸಿಕೊಂಡಿದೆ. ಸಂಘದ ಮನವಿಯನ್ನು ಎಲ್ಲರೂ ಗಂಭೀರವಾಗಿ ತೆಗೆದುಕೊಂಡಿದ್ದು, ಇದರಿಂದಾಗಿ ಅನಿರುದ್ಧ್ ಗೆ ಎರಡು ವರ್ಷ ಎಲ್ಲೂ ಕೆಲಸ ಸಿಗದ್ದಿದ್ದರೆ ಆಶ್ಚರ್ಯವಿಲ್ಲ.
ಇಷ್ಟೆಲ್ಲ ಆಗುತ್ತಿದ್ದರೂ ಅನಿರುದ್ಧ್ ಮಾತ್ರ ತಮ್ಮ ವರಸೆಯನ್ನು ಬಿಟ್ಟಿಲ್ಲ. ಅವರ ಮಾನ, ಗೌರವಗಳೆಲ್ಲ ಹರಾಜಾಗುತ್ತಿದ್ದರೂ, ವಿಷ್ಣುವರ್ಧನ್ ಅವರನ್ನು ನಕಲು ಮಾಡುವುದು ಬಿಟ್ಟಿಲ್ಲ. ಆರಂಭದಿಂದಲೂ ಅನಿರುದ್ಧ್, ವಿಷ್ಣುವರ್ಧನ್ ಅವರನ್ನು ಅನುಕರಿಸಲು ಪ್ರಯತ್ನಿಸುತ್ತಲೇ ಇದ್ದರು. ಅವರ ಹಾವ-ಭಾವವನ್ನು ನಕಲು ಮಾಡುತ್ತಿದ್ದರು. ಅವರ ಶೈಲಿಯಲ್ಲೇ ಸಿಂಹನಾಗಿ ಸಿನಿಮಾಗಳಲ್ಲಿ ಘರ್ಜಿಸಲು ಪ್ರಯತ್ನಿಸುತ್ತಿದ್ದರು. ಆದರೆ, ಯಾವುದೂ ಫಲ ಕೊಡಲಿಲ್ಲ. ಅನಿರುದ್ಧ್ ಕೈ ಇಟ್ಟಿದ್ದೆಲ್ಲ ಫ್ಲಾಪ್ ಆಯಿತು. ಹೀಗೆ ನಕಲು ಮಾಡುತ್ತಾ ಮಾಡುತ್ತಾ ವಿಷ್ಣುವರ್ಧನ್ ಅವರ ಹಾವ-ಭಾವ, ಶೈಲಿಯನ್ನು ಕೊನೆಗೂ ಕಲಿತಿದ್ದಾರೆ ಅನಿರುದ್ಧ್.

ಈ ಅನುಭವ ಇತ್ತೀಚೆಗೆ ಮಾಧ್ಯಮದವರಿಗೆ ಎರಡು ಬಾರಿ ಆಯಿತು. ಜೊತೆಜೊತೆಯಲಿ ವಿವಾದ ಸಂಬಂಧ ಸ್ಪಷ್ಟೀಕರಣ ಕೊಡುವುದಕ್ಕೆ ಅನಿರುದ್ಧ್ ಎರಡು ಬಾರಿ ತಮ್ಮ ಮನೆಯಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಿದ್ದರು. ಈ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದವರೆಲ್ಲಅನಿರುದ್ಧ್ ಅವರ ಸ್ಟೈಲ್ ನೋಡಿ ನಗಬೇಕೋ, ಅಳಬೇಕೋ ಎಂದು ಗೊತ್ತಾಗದೇ ಕಕ್ಕಾಬಿಕ್ಕಿಯಾಗಿದ್ದರು. ಅನಿರುದ್ಧ ಈ ಪತ್ರಿಕಾಗೋಷ್ಠಿಗಳಲ್ಲಿ ಮಾಧ್ಯಮದವರನ್ನು ಸಂಬೋಧಿಸುತ್ತಿದ್ದ ರೀತಿ ನೋಡಿದರೆ, ಥೇಟ್ ವಿಷ್ಣುವರ್ಧನ್ ಅವರನ್ನೇ ನೆನಪಿಸುವಂತಿತ್ತು. ವಿಷ್ಣುವರ್ಧನ್ ಸಹ ತಮಗಿಂತ ಕಿರಿಯವನರನು ರಾಜ, ಮರಿ ಎಂದು ಸಂಬೋಧಿಸುತ್ತಿದ್ದರು. ಇದನ್ನೇ ಅನಿರುದ್ಧ್ ಸಹ ನಕಲು ಮಾಡುವುದಕ್ಕೆ ಹೋಗಿ ನಗೆಪಾಟಿಲಿಗೀಡಾಗಿದ್ದಾರೆ. ವಿಷ್ಣುವರ್ಧನ್ ತರಹವೇ ಎಕ್ಸ್ಪ್ರೆಶನ್ ಕೊಡುವುದರ ಜತೆಗೆ, ಆಗಾಗ ಗಲ್ಲ ಸವರುತ್ತಾ ಅವರ ತರಹ ನಕಲು ಮಾಡುವುದಕ್ಕೆ ಅನಿರುದ್ಧ್ ಪ್ರಯತ್ನ ಮಾಡುತ್ತಿದ್ದುದು ನೋಡಿ ಮಾಧ್ಯಮದವರು ನಕ್ಕಿದ್ದೇ ನಕ್ಕಿದ್ದು.
ಅನಿರುದ್ಧ್ ಕಳೆದ 20 ವರ್ಷಗಳಿಂದಲೂ ವಿಷ್ಣುವರ್ಧನ್ ಅವರ ಹಂಗಿನಲ್ಲಿ, ಗುಂಗಿನಲ್ಲೇ ಬದುಕುತ್ತಿದ್ದಾರೆ. ಅವರ ನಂತರ ಜ್ಯೂನಿಯರ್ ವಿಷ್ಣುವರ್ಧನ್ ತರಹ ಆಗುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ಅವರನ್ನು ನೋಡಿ ಕೆಲವರು ಖುಷಿಪಡಬಹುದು, ನೀವು ಸೂಪರ್ ಸಾರ್ ಎಂದು ಆಕಾಶ ತೋರಿಸಬಹುದು. ಆದರೆ, ಹಾಗಂತ ಅನಿರುದ್ಧ್, ವಿಷ್ಣುವರ್ಧನ್ ಆಗುವುದಕ್ಕೆ ಸಾಧ್ಯವೇ ಇಲ್ಲ. ವಿಷ್ಣುವರ್ಧನ್ ಅವರ ಸ್ಥಾನವನ್ನು ತುಂಬುವುದಕ್ಕೆ ಸಾಧ್ಯವಿಲ್ಲ. ಇಂಥ ಒನ್ ಆಂಡ್ ಓನ್ಲಿ ವಿಷ್ಣುವರ್ಧನ್ ಅವರನ್ನು ಇನ್ನಾದರೂ ಅನಿರುದ್ಧ್ ಬಹಳ ಕೆಟ್ಟದಾಗಿ ಅನುಕರಿಸುವುದನ್ನು ಬಿಟ್ಟು, ತಮ್ಮದೇ ಸ್ವಂತ ಶೈಲಿಯನ್ನು ಅನುಸರಿಸಿಕೊಂಡರೆ ಆಗ ಅವರಿಗೂ ಕ್ಷೇಮ, ಬೇರೆಯವರಿಗೂ ಕ್ಷೇಮ.